ಬೆಂಗಳೂರು: ದಿವಂಗತ ಅನಂತ್ ಕುಮಾರ್ ಅವರು ಬೆಳೆಸಿದ ಹುಡುಗ ನಾನು. ತೇಜಸ್ವಿನಿ ಅನಂತ್ ಕುಮಾರ್ ಅವರು ನನ್ನನ್ನು ಬೆಂಬಲಿಸುತ್ತಾರೆ. ಅಲ್ಲದೆ ಪ್ರೋತ್ಸಾಹ ಕೂಡ ನೀಡಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅನಂತ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೆಲುಕು ಹಾಕಿಕೊಂಡರು. ತೇಜಸ್ವಿನಿ ಅನಂತ್ ಕುಮಾರ್ ಅವರು ಆಶೀರ್ವಾದ ಹಾಗೂ ಸಂಪೂರ್ಣ ಬೆಂಬಲ ನೀಡುವವರಿದ್ದಾರೆ. ಅನಂತ್ ಕುಮಾರ್ ಅವರು ಹೈಸ್ಕೂಲ್ ದಿವಸದಿಂದ ನನ್ನನ್ನು ಬೆಳೆಸಿದವರು. ಅಂತಹ ಮೇರು ನಾಯಕರು ಇದ್ದಂತಹ ಕ್ಷೇತ್ರದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಹೀಗಾಗಿ ಎಲ್ಲರು ಸಹಕರಿಸುವಂತೆ ಮತದಾರರಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ನಾನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾಗ ಅದಮ್ಯ ಚೇತನ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸುತ್ತಿದ್ದರು. ಕಾರ್ಯಕ್ರಮದ ನಿರೂಪಣೆ ಮಾಡಲು ಅವಕಾಶ ನೀಡುತ್ತಿದ್ದರು. ಅಷ್ಟು ಮಾತ್ರವಲ್ಲದೇ ಯಾವುದಾದರೂ ಕಾರ್ಯಕ್ರಮದಲ್ಲಿ 5-10 ನಿಮಿಷ ಮಾತನಾಡಲು ಅವಕಾಶ ನೀಡುವ ಮೂಲಕ ನನ್ನನ್ನು ಬೆಳೆಸಿದ್ದಾರೆ ಅಂದ್ರು.
ಅಡ್ವಾಣಿಯವರ ಜನಚೇತನ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ನನ್ನನ್ನು ಕಳುಹಿಸಿ ಎಂದು ನಾನು ಅನಂತ್ ಕುಮಾರ್ ಅವರನ್ನು ಬಹಳ ಕಾಡಿದ್ದೆನು. ಹೀಗಾಗಿ ಸಾಹೆಬ್ರು ನನ್ನನ್ನು ಜನಚೇತನ ಯಾತ್ರೆಗೆ ಕಳುಹಿಸಿದ್ದರು. ಆವಾಗಿಂದಲೇ ಅವರು ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ರು.
ನಮ್ಮ ತಾಯಿಯಂತೆ ಅವರು ಕೂಡ ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹಲವು ಬಾರಿ ಹೇಳಿದ್ದೆ. ಹೀಗಾಗಿ ಈ ಹಿಂದೆ ತೇಜಸ್ವಿನಿ ಅನಂತ್ ಕುಮಾರ್ ಅವರು ಅಭ್ಯರ್ಥಿ ಎಂದು ಹೆಸರು ಕಳುಹಿಸಿದ್ರೋ, ಆವಾಗ ಟ್ವೀಟ್ ಮಾಡುವ ಮೂಲಕ ಬಹಳ ಸಂತೋಷದ ಸಂಗತಿ. ಅಂಥವರು ಇಲ್ಲಿಗೆ ನಾಯಕರಾಗಬೇಕು ಎಂದು ಹೇಳಿದ್ದೆ. ಆದ್ರೆ ಪಕ್ಷದ ಹೈಕಮಾಂಡ್ ಯಾವ ದೃಷ್ಟಿಯಿಂದ ಈ ರೀತಿಯ ನಿರ್ಧಾರ ತೆಗೆದುಕೊಂಡಿತೆಂದು ಗೊತ್ತಿಲ್ಲ. ಅವರು ಅಭ್ಯರ್ಥಿಯಾಗ್ತಿದ್ರೆ ಖುಷಿ ಪಡುತ್ತಿದ್ದರು. ನಾನು ಕೂಡ ನಮ್ಮ ತಾಯಿ ಅಭ್ಯರ್ಥಿಯಾಗುತ್ತಿದ್ರೆ ಎಷ್ಟು ಖುಷಿ ಪಡುತ್ತಿದ್ದೆನೋ ಅಷ್ಟೇ ಖುಷಿ ಅವರು ಕ್ಯಾಂಡಿಡೇಟ್ ಆದಾಗಲೂ ಖುಷಿಯಾಗುತ್ತಿದ್ದೆ. ಆದ್ರೂ ಅವರು ಈ ಸಂದರ್ಭದಲ್ಲಿ ನನಗೆ ಪ್ರೋತ್ಸಾಹ ಕೊಡುವವರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಪಕ್ಷದ ಅಧ್ಯಕ್ಷರು ಹೋಗಿ ಗೆದ್ದು ಬಾ ಎಂದು ನನಗೆ ಇಂದು ಸಂಪೂರ್ಣ ಆಶೀರ್ವಾದ ಮಾಡಿದರು. ಒಬ್ಬ ಕಾರ್ಯಕರ್ತನನ್ನು ಗುರುತಿಸಿ, ಪಕ್ಷದ ಬೆಳವಣಿಗೆಗೆ ಹಾಗೂ ಪಕ್ಷಕ್ಕೆ ಬಹಳ ಅವಕಾಶ ಆಗುತ್ತೆ. ಹೀಗಾಗಿ ಈ ಕಾರ್ಯಕರ್ತನನ್ನು ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವಕ್ಕೆ ಬಹಳ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜ್ಯದ ನಾಯಕರಾದ ಯಡಿಯೂರಪ್ಪ, ಅಶೋಕ್, ಸತೀಶ್ ರೆಡ್ಡಿ ಹಾಗೂ ಸೋಮಣ್ಣ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ರು.