ಬೆಂಗಳೂರು: ಅಬಕಾರಿ ಸಚಿವ ಆರ್ಬಿ ತಿಮ್ಮಾಪೂರ (RB Timmapur) ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಬಿಜೆಪಿ-ಜೆಡಿಎಸ್ (BJP-JDS) ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ತಮಟೆ, ಭಜನೆ ಮಾಡಿ ಅಹೋರಾತ್ರಿ ಪ್ರತಿಭಟಿಸಿದ ಶಾಸಕರು ಅಬಕಾರಿ ಇಲಾಖೆಯಲ್ಲಿ (Excise Department) 6 ಸಾವಿರ ಕೋಟಿ ರೂ. ಹಗರಣ ನಡೆದಿದೆ. ಅಸ್ಸಾಂ, ತಮಿಳುನಾಡು, ಕೇರಳ ಚುನಾವಣೆಗೆ ಈ ಹಣಕ ಬಳಕೆ ಮಾಡಲಾಗುತ್ತದೆ. ತಿಮ್ಮಾಪೂರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಮೊಗಸಾಲೆ ಪ್ರವೇಶ ದ್ವಾರದಲ್ಲಿ ಕುಳಿತ ಸದಸ್ಯರು ತಮಟೆ ಬಾರಿಸಿ ಆಕ್ರೋಶ ಹೊರಹಾಕಿದರು. ಕೋಟಿ ಕೋಟಿ ಲೂಟಿ, ರಾಜೀನಾಮೆ ಕೊಡಲೇಬೇಕು ಎಂದು ಹಾಡು ಹಾಡಿದರು. ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ ಘೋಷಣೆ ಮೂಲಕ ವ್ಯಂಗ್ಯ ಮಾಡಿದರು. ನಂತರ ವಿಧಾನಸೌಧದ ಕಾರಿಡಾರ್ನಲ್ಲಿ ಹೆಜ್ಜೆ ಹಾಕಿ ಹಾಡನ್ನು ಹಾಡುವ ಮೂಲಕ ಪ್ರತಿಭಟಿಸಿದರು. ರಾತ್ರಿ ವಿಧಾನಸೌಧದ ಮೊಗಸಾಲೆಗೆ ಹಾಸಿಗೆಗಳನ್ನು ತಂದು ಸದಸ್ಯರು ನಿದ್ದೆ ಮಾಡಿದರು. ಇದನ್ನೂ ಓದಿ: ಮಂಗಳೂರು| ತಂದೆ-ಚಿಕ್ಕಪ್ಪನ ಗಲಾಟೆ ಬಿಡಿಸಲು ಹೋಗಿ ಅಪ್ಪನ ಕತ್ತಿಯೇಟಿಗೆ ಮಗಳು ಬಲಿ
ಇಂದು ಬೆಳಗ್ಗೆ 4 ಗಂಟೆಗೆ ಎದ್ದು ಚಹಾ ಕುಡಿದು ವಿಧಾನಸೌಧದ ಒಳಭಾಗದಲ್ಲೇ ಶಾಸಕರು ವಾಕಿಂಗ್ ಮಾಡಿದರು. ಮಂಗಳೂರಿನ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿ, ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈ ಹಿಂದೆ ವಾಲ್ಮೀಕಿ ಹಗರಣ ನಡೆದಾಗ ತೆಲಂಗಾಣ ಚುನಾವಣೆ ಇತ್ತು. ಈಗ ತಮಿಳುನಾಡು ಚುನಾವಣೆ ಇದೆ. ಹೀಗಾಗಿ ಇಲ್ಲೂ ಭ್ರಷ್ಟಾಚಾರ ನಡೆದಿದ್ದು ತನಿಖೆಯಾಗಬೇಕು. ಮುಂದಿನ ಹೋರಾಟ ಸಂಬಂಧ ಇವತ್ತು ಬಿಜೆಪಿ, ಜೆಡಿಎಸ್ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯಿಸಿ, ಸರ್ಕಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ದಾಖಲೆ ಸಮೇತ ಸರ್ಕಾರದ ಮುಂದಿಟ್ಟರೂ ಸರ್ಕಾರ ಒಪ್ಪುವ ಪರಿಸ್ಥಿತಿಯಲ್ಲಿಲ್ಲ. ಸಿಎಂ ಈ ಹಿಂದೆ ಇದ್ದಂತೆ ಇಲ್ಲ. ಸಿದ್ದರಾಮಯ್ಯನವರು ಏನು ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂದೂ ಎರಡು ಪಕ್ಷದವರ ಹೋರಾಟ ಮುಂದುವರೆಯುತ್ತದೆ. ಪ್ರತಿಭಟನೆ ವೇಳೆ ಕುಮಾರಸ್ವಾಮಿಯವರ ಅನುಪಸ್ಥಿತಿ ಕಾಡುತ್ತಿದೆ. ಅವರು ಇಲ್ಲಿ ಇದ್ದಿದ್ದರೆ ವಿಚಾರವನ್ನ ಇನ್ನೂ ಹೆಚ್ಚಿನ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಿತ್ತು ಎಂದರು.

