ಬೆಂಗಳೂರು: ಬಿಜೆಪಿ (BJP) ನಾಯಕರು ಸೋಲಿನ ಹತಾಶೆಯಿಂದ ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ (H.C Mahadevappa) ವಾಗ್ದಾಳಿ ನಡೆಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಆರೋಪಕ್ಕೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅವರು ಸುಳ್ಳನ್ನು ಸತ್ಯ ಮಾಡಲು ಹೊರಟ ವಿಚಾರ ಜಗಜ್ಜಾಹೀರಾಗಿದೆ. ಸಾಕ್ಷಿ ಆಧಾರ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರು ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಇದೇ ಕಾರಣಕ್ಕೆ ಜನರು ಅವರನ್ನು ಸೋಲಿಸಿ ಮನೆಗೆ ಕಳಿಸಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗೆ ಪಾಕ್ ಮೇಲೆ ಸಿಟ್ಯಾಕೆ?
ಕಾಂಗ್ರೆಸ್ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇಟ್ಟು ನಮಗೆ ಪೂರ್ಣ ಬಹುಮತ ನೀಡಿದ್ದಾರೆ. ಬಿಜೆಪಿ ವೈಫಲ್ಯಗಳನ್ನು ಜನರ ಮುಂದೆ ತೆರೆದಿಟ್ಟ ಮೇಲೆ ಜನ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಆದರೆ ಬಿಜೆಪಿ ಸುಳ್ಳು ಆರೋಪ ಮಾಡಿ ಸರ್ಕಾರದ ಮೇಲೆ ಅಪನಂಬಿಕೆ ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ನಡೆಯುವುದಿಲ್ಲ ಎಂದಿದ್ದಾರೆ.
ಕಮಿಷನ್ ವಿಚಾರಕ್ಕೆ ಅಜ್ಜಯ್ಯನ ಮಠದಲ್ಲಿ ಆಣೆ ಮಾಡಲು ಸವಾಲು ಹಾಕಿದ್ದಾರೆ. ಅಜ್ಜಯ್ಯನ ಮಠಕ್ಕೆ ಹೋದರೆ ಸತ್ಯ ಹೊರಗೆ ಬರುತ್ತಾ? ಆಣೆ ಪ್ರಮಾಣ ಅದೆಲ್ಲವೂ ಮೂಢನಂಬಿಕೆಯಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇಡಬೇಕು. ಅದು ಬಿಟ್ಟು ಆಣೆ ಪ್ರಮಾಣ ಎನ್ನುವುದು ಸರಿಯಲ್ಲ. ಡಿ.ಕೆ ಶಿವಕುಮಾರ್ ಅವರಿಗೆ ವೈಯಕ್ತಿಕವಾಗಿ ಭಕ್ತಿ ಇರಬಹುದು. ಆದರೆ ನಾವೆಲ್ಲ ಸಂವಿಧಾನದಲ್ಲಿ ನಂಬಿಕೆ ಇಡಬೇಕು ಎಂದಿದ್ದಾರೆ.
ಕೆಲಸ ಆಗಿದೆಯಾ ಇಲ್ಲವೇ ನೋಡುತ್ತೇನೆ ಎಂದು ಡಿಸಿಎಂ ಈಗಾಗಲೇ ಹೇಳಿದ್ದಾರೆ. ಕಾಮಗಾರಿ ಪರಿಶೀಲಿಸದೆ ಹಣ ರಿಲೀಸ್ ಮಾಡಲು ಆಗುತ್ತಾ? ಕಾಮಗಾರಿ ಆಗಿದೆಯಾ ಇಲ್ಲವೇ ಎಂದು ತನಿಖೆ ಮಾಡುವುದು ತಪ್ಪಾ? ಮಂತ್ರಿಗಳು ಪರಿಶೀಲನೆ ಮಾಡೋದು ತಪ್ಪಾ? ಇವರ ಬಳಿ 15% ಕಮಿಷನ್ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ. ಅನೇಕ ತನಿಖಾ ಸಂಸ್ಥೆಗಳು ಇವೆ. ಅಲ್ಲಿಗೆ ದಾಖಲಾತಿಗಳನ್ನು ಕೊಡಲಿ ಎಂದಿದ್ದಾರೆ.
ನಾವು ಬಿಜೆಪಿ ಮೇಲೆ 40% ಆರೋಪ ಮಾಡಿದ್ದಾಗ ಕೆಂಪಣ್ಣ ಅವರೇ ಪತ್ರದ ಮೂಲಕ ಕೊಟ್ಟಿದ್ದರು. ಆದರೆ 15% ಯಾವುದೇ ಆಧಾರ ಇವರು ಕೊಟ್ಟಿಲ್ಲ. 15%ಗೆ ದಾಖಲಾತಿ ಇದ್ದರೆ ಕೊಡಲಿ ಎಂದು ಸವಾಲ್ ಹಾಕಿದ್ದಾರೆ.
ಬಾಕಿ ಬಿಲ್ ಪಾವತಿಗೆ ಕೆಂಪಣ್ಣರಿಂದ ಡೆಡ್ಲೈನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಕ್ಕೆ ಡೆಡ್ಲೈನ್ ಕೊಡೋಕೆ ಕೆಂಪಣ್ಣಗೆ ಅಧಿಕಾರವೇ ಇಲ್ಲ. ಸರ್ಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನ ಮಾಡಲಾಗುತ್ತದೆ. ಎಲ್ಲವನ್ನೂ ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ – ಪಾಲಿಕೆ ಸಿಬ್ಬಂದಿ ಸೇರಿ 10 ಮಂದಿಗೆ ಗಾಯ
Web Stories