ಮಂಗಳೂರು: ಎಂಟು ದಿನಗಳ ಹಿಂದೆ ನಿಗೂಢ ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಾಲೂಕಿನ ಶಂಭೂರಿನ ಎಎಂಆರ್ ಡ್ಯಾಮ್ ಬಳಿ ನದಿ ಕಿನಾರೆಯಲ್ಲಿ ಶವ ಸಿಕ್ಕಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ರಮೇಶ್ ಗೌಡ(45) ಕಳೆದ ಜೂನ್ 2ರ ಬಳಿಕ ನಾಪತ್ತೆಯಾಗಿದ್ದರು.
ಅಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಯಾರೋ ಆತ್ಮೀಯರು ಕರೆದಿದ್ದಾರೆಂದು ಹೇಳಿ ತುರ್ತಾಗಿ ಮನೆಯಿಂದ ತೆರಳಿದ್ದ ರಮೇಶ್ ಗೌಡ, ಆ ಬಳಿಕ ಕಾಣೆಯಾಗಿದ್ದರು. ಹೀಗಾಗಿ ಎರಡು ದಿನಗಳ ಬಳಿಕ ಅವರ ಪತ್ನಿ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಇದೀಗ ರಮೇಶ್ ಗೌಡರ ಶವ ಬಂಟ್ವಾಳ ಬಳಿಯ ಜಲಾಶಯ ಪಕ್ಕದಲ್ಲಿ ಪತ್ತೆಯಾಗಿದ್ದು, ಕೊಲೆಗೈದು ಬಿಸಾಕಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಶವದ ತಲೆಯ ಭಾಗಕ್ಕೆ ಗಾಯ ಆಗಿರುವುದು ರಮೇಶ್ ಕೊಲೆ ನಡೆದಿದೆಯೇ ಅನ್ನುವ ಬಗ್ಗೆ ಶಂಕೆಗೆ ಕಾರಣವಾಗಿದೆ. ಬಂಟ್ವಾಳ ಮತ್ತು ಉಪ್ಪಿನಂಗಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.