ಮೈಸೂರು: ಜಿಲ್ಲೆಯಲ್ಲಿ ಭೂಗಳ್ಳರ ಜಾಲ ಪತ್ತೆಯಾಗಿದ್ದು ಈ ಜಾಲದ ಕಿಂಗ್ ಪಿನ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಎಂಬುದು ಈಗ ಗೊತ್ತಾಗಿದ್ದು, ಬಂಧಿಸಲಾಗಿದೆ.
ಪಂಚಾಕ್ಷರಿ (38) ಬಂಧಿತ ಆರೋಪಿ. ಈತ ಮೈಸೂರಿನ ಅಗ್ರಹಾರದ ನಿವಾಸಿಯಾಗಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ. ಈತನ ನೇತೃತ್ವದ ತಂಡ ನಗರದಲ್ಲಿ ಖಾಲಿ ಸೈಟ್ಗಳಿಗೆ ಬೇಲಿ ಹಾಕುತ್ತಿತ್ತು. ಮುಡಾ ಹಾಗೂ ಪಾಲಿಕೆ ಕಚೇರಿಗಳಲ್ಲಿ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಈ ಜಾಗ ನಮ್ಮದೆಂದು ಜಾಗದ ಮೂಲ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದರು.
ನಂತರ ಪಂಚಾಯ್ತಿಯಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವಂತೆ ಜಾಗದ ಮೂಲ ಮಾಲೀಕನಿಗೆ ಇವರೇ ಸಲಹೆ ನೀಡಿ ದೊಡ್ಡ ಮೊತ್ತ ಪಡೆದು ಬೇಲಿ ತೆರವುಗೊಳಿಸುತ್ತಿದ್ದರು. ಆರೋಪಿ ಪಂಚಾಕ್ಷರಿ ನೇತೃತ್ವದಲ್ಲಿ ಈ ಭೂಗಳ್ಳತನ ನಡೆಯುತ್ತಿತ್ತು.
ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಇದೇ ರೀತಿಯ ಪ್ರಕರಣದಲ್ಲಿ ಪಂಚಾಕ್ಷರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಭೂಗಳ್ಳತನ ಮಾಫಿಯಾ ಬಯಲಾಗಿದೆ. ಸದ್ಯ ಆರೋಪಿಯನ್ನು ನಜರ್ಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv