ಹಾಸನ: ಭಾರೀ ಮಳೆಯಿಂದ ರಸ್ತೆಗೆ ಗುಡ್ಡ ಜರಿದು ಸಂಪರ್ಕ ಕಡಿತಗೊಂಡಿದ್ದ ಬಿಸಿಲೆ ಘಾಟಿಯಲ್ಲಿ ರಸ್ತೆ ಸಂಚಾರ ಮತ್ತೆ ಆರಂಭವಾಗಿದೆ.
ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಸಿಮೆಂಟ್ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸಕಲೇಶಪುರ ಕರಾವಳಿ ಮಾರ್ಗದ ಸಂಪರ್ಕ ಸಂಪೂರ್ಣ ಕಡಿತವಾಗಿತ್ತು. ಈಗ ರಸ್ತೆಯನ್ನು ದುರಸ್ತಿ ಮಾಡಿದ್ದು ಲಘು ವಾಹನಗಳು ಸಂಚರಿಸಬಹುದಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಶಿರಾಡಿ ಘಾಟ್ ಆರಂಭವಾಗಿತ್ತು. ಈಗ ಬಿಸಿಲೆ ಘಾಟಿಯೂ ಆರಂಭಗೊಂಡಿದ್ದು ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯ ರಭಸಕ್ಕೆ 7 ಕಿಮೀ ಕಾಂಕ್ರೀಟ್ ರಸ್ತೆ ನಾಶವಾಗಿತ್ತು. ಬೆಟ್ಟದ ಮೇಲೆ ಸಣ್ಣ ತೊರೆಯಂತಿದ್ದ ನದಿ ದೊಡ್ಡ ನದಿಯಾಗಿ ರೂಪಾಂತರಗೊಂಡು ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿತ್ತು.
ರಸ್ತೆ ಸಂಪರ್ಕ ಸರಿಯಾದರೂ ರೈಲು ಮಾರ್ಗ ಇನ್ನೂ ಆರಂಭಗೊಂಡಿಲ್ಲ. ಸಕಲೇಶಪುರ ಭಾಗದಲ್ಲಿ ಭಾರೀ ಕಲ್ಲು ಮತ್ತು ಗುಡ್ಡಗಳು ಹಳಿ ಮೇಲೆ ಬಿದ್ದ ಪರಿಣಾಮ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ರೈಲು ಸೇವೆಯೂ ಆರಂಭಗೊಳ್ಳುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv