ತುಮಕೂರು: ಕಾಂಗ್ರೆಸ್ ಶಾಸಕ ಜಿ.ಪರಮೇಶ್ವರ್ ಅವರ ಬರ್ತ್ ಡೇ ಫ್ಲೆಕ್ಸ್ ತೆರವುಗೊಳಿಸಿ ಜೆಡಿಎಸ್ ಶಾಸಕರ ಹುಟ್ಟುಹಬ್ಬ ಫ್ಲೆಕ್ಸ್ ಗೆ ಅನುವು ಮಾಡಿಕೊಟ್ಟ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಿಲ್ಲೆಯ ಕೊರಟಗೆರೆ ಪಟ್ಟಣ ಪಂಚಾಯತ್ ಬಳಿ ಮಾತಿನ ಚಕಮಕಿ ನಡೆದಿದೆ.
ಆಗಸ್ಟ್ 6 ರಂದು ಜಿ.ಪರಮೇಶ್ವರ್ ಹುಟ್ಟುಹಬ್ಬ ನಿಮಿತ್ತ ಕೊರಟಗೆರೆ ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಿ ಪರಮೇಶ್ವರ್ ಫ್ಲೆಕ್ಸ್ಗಳನ್ನು ಅಭಿಮಾನಿಗಳು ಕಟ್ಟಿದ್ದರು. ಈ ಫ್ಲೆಕ್ಸ್ ಗಳನ್ನು ಕೊರಟಗೆರೆ ಪಟ್ಟಣ ಪಂಚಾಯತ್ ಸಿಬ್ಬಂದಿ ತೆರುವುಗೊಳಿಸುತ್ತಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಫ್ಲೆಕ್ಸ್ ತೆರವುಗೊಳಿಸದಂತೆ ಅಡ್ಡಿಪಡಿಸಿದ್ದರು. ಈ ನಡುವೆ ಜೆಡಿಎಸ್ ನಿಂದಲೂ ಮಾಜಿ ಶಾಸಕ ಸುಧಾಕರ್ ಲಾಲ್ ರ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಸಂವಿಧಾನದತ್ತ ಸಂಸದ ಸ್ಥಾನಕ್ಕೆ ಬೆಲೆ ಕೊಡದ ಶ್ರೀನಿವಾಸ್ರದ್ದು ವಿಕೃತ ಮನಸ್ಥಿತಿ: ಬಿಜೆಪಿ ಟೀಕೆ
ಪರಮೇಶ್ವರ್ ಅವರ ಫ್ಲೆಕ್ಸ್ ಇರುವುದರಿಂದ ಸುಧಾಕರ್ ಅವರ ಫ್ಲೆಕ್ಸ್ ಹಾಕಲು ಜಾಗ ಇರಲಿಲ್ಲ. ಹಾಗಾಗಿ ಪರಮೇಶ್ವರ್ ಅವರ ಫ್ಲೆಕ್ಸ್ ತೆರವುಗೊಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ತೆರವುಗೊಳಿಸದಂತೆ ಪಟ್ಟು ಹಿಡಿದರೆ, ಜೆಡಿಎಸ್ ಕಾರ್ಯಕರ್ತರು ಫ್ಲೆಕ್ಸ್ ತೆರುವುಗೊಳಿಸಲು ಒತ್ತಾಯಿಸಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಮಿತ್ರಮಂಡಳಿಯಲ್ಲಿ ಬಿರುಕು: ಎಸ್ಟಿಎಸ್ ವಿರುದ್ಧ ಹೆಚ್. ವಿಶ್ವನಾಥ್ ಬಹಿರಂಗ ಅಸಮಾಧಾನ