ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬಿನ್ನಿಪೇಟೆ ವಾರ್ಡ್ನ ಮಾಜಿ ಕಾರ್ಪೊರೇಟರ್ ಐಶ್ವರ್ಯ ಅವರ ಪತಿ ರೋಹಿತ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದು ರೋಹಿತ್ ಕಾರು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರೋಹಿತ್ ನಂದಗುಡಿ ಸಮೀಪದ ತನ್ನ ಜಮೀನಿನಲ್ಲಿ ರೇಸ್ ಟ್ರ್ಯಾಕ್ ಮಾಡಿದ್ದರು. ರೋಹಿತ್ ಆಗಾಗ ಅಲ್ಲಿಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ಕಳೆದ ವಾರವೂ ಸಹ ಇದೇ ರೀತಿ ತಮ್ಮ ಜಮೀನಿನ ರೇಸ್ ಟ್ರ್ಯಾಕ್ ಬಳಿ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ಹೇಳಿ ತಮ್ಮ ಸ್ನೇಹಿತರಿಂದ ಹಣ ಪಡೆದು ಜಮೀನಿಗೆ ರೋಹಿತ್ ಬಂದಿದ್ದರು. ಆ ಬಳಿಕ ರೋಹಿತ್ ನಾಲ್ಕು ದಿನಗಳಾದರೂ ಸಹ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಮೇಕೆಗೆ ತಾಳಿ ಕಟ್ಟಿದ ಯುವಕ – ಮದುವೆಯಾಗಲು ಇತ್ತು ಬಲವಾದ ಕಾರಣ
ನಾಪತ್ತೆಯಾಗಿ 8 ದಿನಗಳ ಬಳಿಕ ಇಂದು ರೋಹಿತ್ ಮೊಬೈಲ್ ಸ್ವಿಚ್ ಆಫ್ ಆಗಿ ಹೆದ್ದಾರಿಯಲ್ಲಿತ್ತು. ಜೊತೆಗೆ ಅವರ ಕಾರು ಪತ್ತೆಯಾಗಿದೆ. ಕಾರಿನ ಮೇಲೆ ರಕ್ತದ ಕಲೆ ಪತ್ತೆಯಾಗಿದ್ದು, ಜೊತೆಗೆ ಪಕ್ಕದಲ್ಲೇ ಇರುವ ದೇವಸ್ಥಾನದ ಬಳಿ ಚಪ್ಪಲಿ ಮತ್ತು ಬೆಲ್ಟ್ ಸಹ ಪತ್ತೆಯಾಗಿದೆ. ರೋಹಿತ್ ಜಮೀನು ವ್ಯವಹಾರ, ಸೇರಿದಂತೆ ಹಣಕಾಸು ವ್ಯವಹಾರಗಳನ್ನು ಮಾಡಿಕೊಂಡಿದ್ದರು ಹಾಗಾಗಿ ಅವರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿರುವ ಸಂಶಯ ಕುಟುಂಬಸ್ಥರಿಂದ ವ್ಯಕ್ತವಾಗಿದೆ. ಇದನ್ನೂ ಓದಿ: ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರನಾಕ್ ಕಳ್ಳ
ರೋಹಿತ್ ನಾಪತ್ತೆಯಾಗಿರುವ ಬಗ್ಗೆ ಕಿಡ್ನಾಪ್ ಪ್ರಕರಣವನ್ನು ದಾಖಲಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ನಂದಗುಡಿ ಪೋಲೀಸರು ಮೂರು ತಂಡಗಳನ್ನು ರಚನೆ ಮಾಡಿ ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಪೊಲೀಸರು ಅನುಮಾನದ ಮೇಲೆ 8 ಜನರನ್ನು ವಶಕ್ಕೆ ಪಡೆದ ತನಿಖೆ ಮುಂದುವರಿಸಿದ್ದಾರೆ.