ಬಳ್ಳಾರಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರೊಬ್ಬರು ಪ್ರಾಣ ಉಳಿಸುವಂತೆ ರಸ್ತೆಯಲ್ಲೇ ಒದ್ದಾಡಿ ಗೋಗರೆದು ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಮೃತ ಸವಾರ ಫಕ್ರುದ್ದೀನ್ ಸಂಡೂರಿನ ನಿವಾಸಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಸಂಡೂರಿನಿಂದ ಹೊಸಪೇಟೆಗೆ ತೆರಳುತ್ತಿದ್ದ ಫಕ್ರುದ್ದೀನ್ ಅವರಿಗೆ ಸಂಡೂರಿನ ಕಳ್ಳಹಳ್ಳಿ ಬಳಿ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಫಕ್ರುದ್ದೀನ್ ತನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಒಂದು ಗಂಟೆ ಕಾಲ ರಸ್ತೆಯ ಮಧ್ಯೆಯೇ ಬಿದ್ದು ಒದ್ದಾಡಿ ಗೋಗರೆದರೂ ಯಾರೂ ಸಹ ಸಹಾಯ ಮಾಡಲಿಲ್ಲ ಎನ್ನಲಾಗಿದೆ.
ಕೊನೆಗೆ ಲಾರಿ ಚಾಲಕರೊಬ್ಬರು ಫಕ್ರುದ್ದೀನ್ ಅವರಿಗೆ ನೀರು ಕುಡಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ರು. ಆದ್ರೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವುದು ತಡವಾದ ಪರಿಣಾಮ ಆಸ್ಪತ್ರೆಯಲ್ಲಿ ಫಕ್ರುದ್ದೀನ್ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ರಸ್ತೆಯಲ್ಲಿ ಒದ್ದಾಡುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವಲ್ಲಿ ಜನರು ನಿರತರಾಗಿದ್ದರೇ ವಿನಃ ಯಾರಿಬ್ಬರೂ ಸಹಾಯ ಮಾಡಿಲ್ಲ. ಈ ಹಿಂದೆಯೂ ಈ ರೀತಿಯ ಪ್ರಕರಣಗಳು ಬಂದಾಗ ಮಾನವೀಯತೆ ಬಗ್ಗೆ ಸಾಕಷ್ಟು ಸುದ್ದಿಯಾಗಿ ಚರ್ಚೆಯಾಗಿತ್ತು. ಇಷ್ಟೆಲ್ಲ ಆದರೂ ಇನ್ನೂ ಜನರಲ್ಲಿ ಜಾಗೃತಿ ಮೂಡದೇ ಇರುವುದು ದುರಂತವೇ ಸರಿ.