ಬೆಂಗಳೂರು: ಕೆಲಸಕ್ಕೆ ತೆರಳುತ್ತಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ್ ನ ಹೆಬ್ಬಗೋಡಿಯ ಹೊಸೂರು ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಬೈಕ್ ಸವಾರನನ್ನು ರಾಮಮೂರ್ತಿ ನಗರದ ನಿವಾಸಿ ವಿಜಯ್ ಬಾಬು(35) ಎಂದು ಗುರುತಿಸಲಾಗಿದೆ.
ವಿಜಯ್ ಬೊಮ್ಮಸಂದ್ರದ ಖಾಸಗಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಬೆಳಿಗ್ಗೆ ಕಾರ್ಖಾನೆಗೆ ಬೈಕ್ ನಲ್ಲಿ ಕೆಲಸಕ್ಕೆ ತೆರಳುವಾಗ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಆಯತಪ್ಪಿ ವಿಜಯ್ ಕೆಳಗೆ ಬಿದ್ದಿದ್ದಾರೆ. ಈ ವೇಳೇ ಬಸ್ ನ ಚಕ್ರ ವಿಜಯ್ ತಲೆ ಮೇಲೆ ಹರಿದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳದಲ್ಲಿದ್ದವರು ವಿಜಯ್ ಅವರನ್ನ ಆಸ್ಪತ್ರೆಗೆ ಕೊಂಡೊಯ್ದರಾದ್ರೂ ವಿಜಯ್ ಬದುಕುಳಿಯಲಿಲ್ಲ.
ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಹೆಬ್ಬಗೊಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.