ಬೆಂಗಳೂರು: ಯುವಕನೊಬ್ಬ ಬೈಕಿನಲ್ಲಿ ತನ್ನ ಅಕ್ಕನನ್ನು ಬಸ್ ಹತ್ತಿಸಿ ವಾಪಸ್ ಬರುವಾಗ ಅಡ್ಡ ಬಂದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಯುವಕ ಹಾಗೂ ಜಿಂಕೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ ನಡೆದಿದೆ.
ಹರೀಶ್ (21) ಮೃತಪಟ್ಟ ದುರ್ದೈವಿ. ಅಪ್ಪಗೊಂಡನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹರೀಶ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಬೆಳಗಿನ ಜಾವ ಸುಮಾರು 5.30ಕ್ಕೆ ಈ ಘಟನೆ ನಡೆದಿದ್ದು, ಬೆಳ್ಳಂಬೆಳಗ್ಗೆ ಮಂಜು ಮುಸುಕಿನ ಕಾರಣದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ ಕಾಡು ಪ್ರಾಣಿ ಜಿಂಕೆ ಕೂಡ ಸಾವುನ್ನಪ್ಪಿದೆ. ಬೈಕ್ನಿಂದ ಕೆಳಗೆ ಬಿದ್ದಾಗ ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದ ಕಾರಣ ಹರೀಶ್ ಸಾವನ್ನಪ್ಪಿದ್ದಾನೆ. ನೆಲಮಂಗಲದ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ಬಯಲು ಸೀಮೆ ಭಾಗದಲ್ಲಿ ಕಾಡು ಪ್ರಾಣಿಗಳು ಸಂಖ್ಯೆ ಹೆಚ್ಚಾಗಿದೆ. ಆದರೆ ಜಿಂಕೆ ಕಂಡಿರುವುದು ಇದೆ ಮೊದಲಾಗಿದೆ ಎಂದು ಹರೀಶ್ ಸಂಬಂಧಿಕರು ತಿಳಿಸಿದ್ದಾರೆ. ನೆಲಮಂಗಲ ಸಿಪಿಐ ಶಿವಣ್ಣ ತ್ಯಾಮಗೊಂಡ್ಲು ಪಿಎಸ್ಐ ಕೃಷ್ಣಕುಮಾರ್ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.