ಬೆಂಗಳೂರು: ಎರಡು ವರ್ಷಗಳಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಪೊಲೀಸರ ಕೈಗೆ ಸಿಗದೆ ತಿರುಗಾಡುತ್ತಿದ್ದ ಬೈಕ್ ಸವಾರ ಇಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ರಾಜಾಜಿನಗರ ಪೊಲೀಸರು ಇಂದು ತಪಾಸಣೆ ಮಾಡುತ್ತಿದ್ದ ವೇಳೆ ಮಂಜುನಾಥ ಅವರ KA 41 EG 6244 ನಂಬರ್ ಹೋಂಡಾ ಆಕ್ಟಿವಾ ಬೈಕ್ ತಡೆದಿದ್ದರು. ಬೈಕ್ ತಡೆದ ಪೊಲೀಸರಿಗೆ ಶಾಕ್ ಕಾದಿತ್ತು. ಬೈಕ್ ಮೇಲೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಸೇರಿ ಬರೋಬ್ಬರಿ 70 ಪ್ರಕರಣಗಳಿಗೆ 15,400 ರೂ. ದಂಡ ಕಟ್ಟಿ ಸಪ್ಪೆ ಮೋರೆ ಹಾಕಿಕೊಂಡು ಮನೆ ಕಡೆ ನಡೆದಿದ್ದಾನೆ.
ನಗರದ ತಿಗಳರಪಾಳ್ಯ ನಿವಾಸಿ ಮಂಜುನಾಥನ ವಾಹನದ ಮೇಲೆ ಇಷ್ಟು ಪ್ರಕರಣಗಳು ದಾಖಲಾಗಿದ್ದರೂ, ನಗರದ ತುಂಬಾ ಆರಾಮಾಗಿ ಓಡಾಡುತ್ತಿದ್ದ. ಎರಡು ವರ್ಷದಲ್ಲಿ ಒಮ್ಮೆಯೂ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಇಂದು ಅದೇನು ಗ್ರಹಚಾರ ಕೆಟ್ಟಿತ್ತೋ, ಮಹಾಲಕ್ಷ್ಮಿ ಲೇಔಟ್ನ ಮೆಟ್ರೋ ನಿಲ್ದಾಣದ ಬಳಿ ರಾಜಾಜಿ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದ. ಒಟ್ಟು 70 ಪ್ರಕರಣಗಳಿಗೆ ಬರೋಬ್ಬರಿ 15,400 ರೂ. ದಂಡ ಕಟ್ಟಿ ಸಪ್ಪೆ ಮೋರೆ ಹಾಕಿಕೊಂಡು ಮನೆ ಕಡೆ ನಡೆದಿದ್ದಾನೆ.