ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಪರಿಣಾಮ 4 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ಎಂಜಿ ರಸ್ತೆಯ ಕೆಎಂಡಿ ಕಲ್ಯಾಣ ಮಂಟಪದ ಬಳಿ ಕ್ಯಾಂಟರ್ ವಾಹನ ಚಾಲಕ ವೇಗದಿಂದ ಬರುತ್ತಿದ್ದು, ಅಜಾಗರೂಕತೆಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ನಲ್ಲಿದ್ದ ಮಗು ಕೆಳಗೆ ಉರುಳಿಬಿದ್ದಿದ್ದಾನೆ. ಈ ವೇಳೆ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಡೆದಿದ್ದೇನು?
ಮೃತ ಮಗು ನಗರದ ಚೌಡರೆಡ್ಡಿಪಾಳ್ಯದ ಹೂವಿನ ವ್ಯಾಪಾರಿ ಜಮೀರ್ ಪಾಷಾ ಅವರ 4 ವರ್ಷದ ಮಗು ಸೂಫಿಯಾನ್ ಎಂದು ತಿಳಿದುಬಂದಿದೆ. ಜಮೀರ್ ಪಾಷಾ ಸ್ನೇಹಿತ ಬಾಬಾ ಜಾಣ್ ಮಗುವನ್ನ ಮನೆಯಿಂದ ತಂದೆಯ ಹೂವಿನ ಅಂಗಡಿ ಬಳಿ ಕರೆದುಕೊಂಡು ಬಂದಿದ್ದು, ತದನಂತರ ಮನೆಗೆ ವಾಪಾಸ್ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗದಿಂದ ಬಂದ ಕ್ಯಾಂಟರ್ ಲಾರಿ ಬೈಕ್ ಗೆ ಗುದ್ದಿದ್ದು, ಈ ಘಟನೆ ಸಂಭವಿಸಿದೆ.
ಬೈಕ್ ಗೆ ಡಿಕ್ಕಿ ಹೊಡೆದ ನಂತರ ಕ್ಯಾಂಟರ್ ಚಾಲಕ ವಾಹನ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.