ನವದೆಹಲಿ: ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನು INDIA ಮೈತ್ರಿಕೂಟದ (INDIA Alliance) ಸಂಚಾಲಕರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಈ ನಿರ್ಧಾರವನ್ನು ಅನುಮೋದಿಸಲು ವಿರೋಧ ಪಕ್ಷಗಳು ಶೀಘ್ರದಲ್ಲೇ ವರ್ಚುವಲ್ ಸಭೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಂಗಳವಾರ ಈ ಪ್ರಸ್ತಾವಿತ ನೇಮಕಾತಿ ಬಗ್ಗೆ ಕಾಂಗ್ರೆಸ್ ಚರ್ಚಿಸಿದೆ ಎನ್ನಲಾಗಿದೆ. INDIA ಮೈತ್ರಿಕೂಟದ ಇತರ ಪಾಲುದಾರರನ್ನು ಸಹ ಸಮಾಲೋಚಿಸಲಾಗಿದೆ ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರವಾಗಿ ಮಂಗಳವಾರ ನಿತೀಶ್ ಕುಮಾರ್ ಅವರು ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿದ ಪೊಲೀಸ್ ಪೇದೆ
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮೈತ್ರಿಕೂಟದ ಇನ್ನೊಬ್ಬ ಪ್ರಮುಖ ನಾಯಕ, ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಾರಾಂತ್ಯದಲ್ಲಿ ಈ ಪ್ರಸ್ತಾಪ ಅಧಿಕೃತಗೊಳ್ಳುವ ನಿರೀಕ್ಷೆಗಳಿದೆ. ಇದನ್ನೂ ಓದಿ: ಅದಾನಿ ಕೇಸ್ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ – ಪತ್ರಿಕೆಯ ವರದಿಯನ್ನು ಅವಲಂಬಿಸಬೇಡಿ : ಸುಪ್ರೀಂ ಹೇಳಿದ್ದೇನು?
ಡಿಸೆಂಬರ್ 19 ರಂದು INDIA ಒಕ್ಕೂಟದ ಪಕ್ಷಗಳು ದೆಹಲಿಯಲ್ಲಿ ತಮ್ಮ ನಾಲ್ಕನೇ ಸಭೆಯನ್ನು ನಡೆಸಿದವು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದ್ದರು. ವಿರೋಧ ಪಕ್ಷದ ಬಣದ ಕೊನೆಯ ಸಭೆಯಲ್ಲಿ, ಸೀಟು ಹಂಚಿಕೆ, ಜಂಟಿ ಪ್ರಚಾರದ ನೀಲನಕ್ಷೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಕಾರ್ಯತಂತ್ರದಂತಹ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಇದನ್ನೂ ಓದಿ: ತೀಸ್ರಿ ಬಾರ್ ಮೋದಿ ಸರ್ಕಾರ್ – ಚುನಾವಣೆಗೆ ಬಿಜೆಪಿಯಿಂದ ಹೊಸ ಘೋಷ ವಾಕ್ಯ