– ಗಿಲ್ಲಿಯಿಂದ ಕಾವ್ಯ ಕೈಸೇರಿತು ಮನೆಯ ಪತ್ರ
– ಕಾವ್ಯ ಕ್ಯಾಪ್ಟನ್ ಆದ್ರೆ ಆ ಕ್ರೆಡಿಟ್ ಗಿಲ್ಲಿಗೆ ಅಂದ್ರು ಫ್ಯಾನ್ಸ್
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಕಾವ್ಯಗೋಸ್ಕರ ಗಿಲ್ಲಿ ದೊಡ್ಡ ತ್ಯಾಗ ಮಾಡಿದ್ದಾರೆ. ತಾನು ಮಾಡಿದ ತ್ಯಾಗದಿಂದ ಗಿಲ್ಲಿ ಮನೆಯಿಂದ ಬಂದ ಪತ್ರವನ್ನು ಕಳೆದುಕೊಂಡರು. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ನಲ್ಲಿ ಮುಂದುವರಿದರು. ಗಿಲ್ಲಿ ಮಾಡಿದ ತ್ಯಾಗ ಕಂಡು ಕಾವ್ಯ ಕರಗಿಹೋದರು.
ಅಷ್ಟಕ್ಕೂ ಏನಾಯ್ತು ಬಿಗ್ ಬಾಸ್ ಮನೆಯಲ್ಲಿ?
ಈ ವಾರ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿದ್ದವು. ಸ್ಪರ್ಧಿಗಳು ತಮ್ಮ ಮನೆಯ ಪತ್ರಗಳನ್ನು ಓದಬೇಕಾದರೆ ಬಿಗ್ ಬಾಸ್ ನೀಡುವ ಟಾಸ್ಕ್ ಪೂರ್ಣಗೊಳಿಸಬೇಕು. ಇಬ್ಬಿಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಟಾಸ್ಕ್ ನೀಡಲಾಯಿತು. ಗೆದ್ದವರು ತಮ್ಮ ಮನೆಯಿಂದ ಬಂದ ಪತ್ರವನ್ನು ಓದಬಹುದು. ಆದರೆ, ಸೋತವರು ಪತ್ರವನ್ನು ಕಳೆದುಕೊಳ್ಳುವರು ಅಂತ ಸೂಚಿಸಲಾಯಿತು. ಇದನ್ನೂ ಓದಿ: ಕಿಚ್ಚ ಸುದೀಪ್ಗೆ ವಿಶೇಷ ಗಿಫ್ಟ್ ನೀಡಲಿದ್ದಾರೆ ಮಲ್ಲಮ್ಮ
ಹೀಗೆ ಸ್ಪರ್ಧೆಯಲ್ಲಿ ಕಾವ್ಯ (Kavya) ಮತ್ತು ಗಿಲ್ಲಿಯನ್ನು (Gilli) ಪ್ರತ್ಯೇಕವಾಗಿ ಕರೆಯಲಾಗಿತ್ತು. ಈ ಟಾಸ್ಕ್ನಲ್ಲಿ ಟ್ವಿಸ್ಟ್ವೊಂದನ್ನು ನೀಡಲಾಗಿತ್ತು. ಕಾವ್ಯ ಎದುರು ಗಿಲ್ಲಿ ಮನೆಯ ಲೆಟರ್ ಹಾಗೂ ಗಿಲ್ಲಿ ಎದುರು ಕಾವ್ಯ ಮನೆಯ ಲೆಟರ್ ಇಡಲಾಗಿತ್ತು. ಯಾರಾದರು ಒಬ್ಬರು ಮಾತ್ರ ಲೆಟರ್ ಅನ್ನು ಹೊರಗೆ ತರಬಹುದಿತ್ತು. ಅಪ್ಪಿತಪ್ಪಿ ಇಬ್ಬರೂ ಲೆಟರ್ ತಂದರೆ, ಇಬ್ಬರೂ ಕೂಡ ಲೆಟರ್ ಕಳೆದುಕೊಂಡು ನಾಮಿನೇಷನ್ನಲ್ಲಿ ಮುಂದುವರಿಯಬೇಕಿತ್ತು. ಈ ಸಂಬಂಧ ಆಲೋಚನೆಗೆ ಎರಡು ನಿಮಿಷ ಕಾಲಾವಕಾಶ ನೀಡಲಾಗಿತ್ತು.
2 ನಿಮಿಷದ ಬಳಿಕ, ‘ಗಿಲ್ಲಿ ನಿಮ್ಮ ನಿರ್ಧಾರ ತಿಳಿಸಿ’ ಅಂತ ಬಿಗ್ ಬಾಸ್ ಕೇಳಿದರು. ಆಗ ಗಿಲ್ಲಿ ಲೆಟರ್ ತೆಗೆದುಕೊಂಡು ಹೊರಗೆ ಬರುವುದಾಗಿ ಸ್ಪಷ್ಟಪಡಿಸಿದರು. ಇತ್ತ ಕಾವ್ಯಗೂ ಇದೇ ಪ್ರಶ್ನೆ ಮುಂದಿಡಲಾಯಿತು. ಆದರೆ, ಕಾವ್ಯ ಲೆಟರ್ ಹೊರ ತರುವುದಿಲ್ಲ ಎಂದು ತಿಳಿಸಿದರು. ಅಲ್ಲದೇ, ಗಿಲ್ಲಿ ಲೆಟರ್ ತಂದೇ ತರುತ್ತಾನೆಂಬ ಭರವಸೆಯನ್ನು ಕಾವ್ಯ ವ್ಯಕ್ತಪಡಿಸಿದರು. ಒಂದು ವೇಳೆ, ಕಾವ್ಯ ಲೆಟರ್ ತಂದರೆ ಹೇಗಪ್ಪ ಎಂಬ ಅಳುಕು ಗಿಲ್ಲಿಯಲ್ಲಿ ಇತ್ತು. ಕೊನೆಗೆ ಗಿಲ್ಲಿ ಮಾತ್ರ ಲೆಟರ್ ತಂದರು. ಗಿಲ್ಲಿಯನ್ನು ಕಾವ್ಯ ಎಷ್ಟು ಅರ್ಥ ಮಾಡಿಕೊಂಡಿದ್ದಾರೆಂಬುದು ಅನೇಕರಲ್ಲಿ ಅಚ್ಚರಿ ಮೂಡಿಸಿತು. ಇದನ್ನೂ ಓದಿ: ರಕ್ಷಿತಾ ಶೆಟ್ಟಿಯದ್ದು `ಗಿಮಿಕ್ ಸೆಲ್ಲಿಂಗ್ ಪಾಯಿಂಟ್’ ಎಂದ ಧೃವಂತ್
ಗಿಲ್ಲಿ ತಂದ ಲೆಟರ್ ನೋಡಿ ಕಾವ್ಯ ಖುಷಿಪಟ್ಟರು. ತನ್ನ ತ್ಯಾಗದ ಬಗ್ಗೆ ಗಿಲ್ಲಿ ಮನೆಯಲ್ಲಿ ಹೆಮ್ಮೆಯಿಂದ ಮಾತನಾಡಿದರು. ಗಿಲ್ಲಿ ತ್ಯಾಗ ಮೆಚ್ಚಿ ಕಾವ್ಯ ಪ್ರೀತಿಯ ಅಪ್ಪುಗೆ ಕೊಟ್ಟರು. ಕೊನೆಗೆ ಗಿಲ್ಲಿ ನಾಮಿನೇಷನ್ನಲ್ಲಿ ಮುಂದವರಿದರು. ಗಿಲ್ಲಿಯ ತ್ಯಾಗದಿಂದ ಗೆದ್ದ ಕಾವ್ಯ ನಾಮಿನೇಷನ್ನಿಂದ ಬಚಾವ್ ಆಗಿ ಈ ವಾರದ ಕ್ಯಾಪ್ಟನ್ ರೇಸ್ನಲ್ಲಿದ್ದಾರೆ. ಈ ವಾರ ಒಂದಷ್ಟು ಪ್ರೇಕ್ಷಕರನ್ನು ಕರೆಸಿ ವೋಟ್ ಮಾಡಿಸಲಾಗಿದೆ. ಬಹುಮತ ಸಿಕ್ಕವರು ಕ್ಯಾಪ್ಟನ್ ಆಗಲಿದ್ದಾರೆ. ಯಾರು ಕ್ಯಾಪ್ಟನ್ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ ಮಾಡಿದೆ. ಎಲ್ಲೆಡೆ ಇವರಿಬ್ಬರ ಜೋಡಿಯದ್ದೇ ಮಾತು. ಬಿಗ್ ಬಾಸ್ ಮನೆ ಆಟದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಸಾಥ್ ಎನ್ನುವಂತೆಯೇ ಇದ್ದಾರೆ. ಎಷ್ಟೋ ಕಡೆ ಕಾವ್ಯಗಾಗಿ ಸ್ಪರ್ಧೆಯಲ್ಲಿ ಗಿಲ್ಲಿ ತ್ಯಾಗ ಮಾಡಿದ್ದಿದೆ. ಗಿಲ್ಲಿಯಿಂದಲೇ ಕಾವ್ಯ ಮನೆಯಲ್ಲಿರೋದು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಆದರೆ, ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಒಂದರ್ಥದಲ್ಲಿ ಗಿಲ್ಲಿಯನ್ನು ಕಾವ್ಯ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂಬುದು ‘ಲೆಟರ್ ಸ್ಪರ್ಧೆ’ಯಲ್ಲಿ ಗೊತ್ತಾಗಿದೆ. ಆದರೂ, ಗಿಲ್ಲಿ ತಮ್ಮ ಆಟದ ಬಗ್ಗೆಯೂ ಗಮನ ಹರಿಸಬೇಕು ಎಂಬ ಸಲಹೆ ಇತರೆ ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಂದ ಕೇಳಿಬರುತ್ತಿದೆ.


