ಬೆಂಗಳೂರು: ಬಿಗ್ಬಾಸ್ ಸೀಸನ್ (Bigg Boss Kannada 11) ಚಾಂಪಿಯನ್ ಆಗಿ ಹೊರ ಹೊಮ್ಮಿದ ಹನುಮಂತ (Hanumantha) ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ.
ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್ ಟ್ಯಾಕ್ಸ್ (Gift Tax) ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ.
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ. ಇದನ್ನೂ ಓದಿ: BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್
ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಅನ್ವಯಿಸಲಾಗುತ್ತದೆ.
ಎಷ್ಟು ಸಿಗಬಹುದು?
ಈ ಮೊದಲು ಬೇರೆ ಬೇರೆ ಬಿಗ್ ಬಾಸ್ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್ ಬಾಸ್ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಹನುಮಂತ ಅವರಿಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ
ಬಿಗ್ ಬಾಸ್ ಶೋದಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಆಗಿರುತ್ತದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ. ಎಲ್ಲೂ ಹೋದರೂ ಬಿಗ್ ಬಾಸ್ ಸ್ಪರ್ಧಿ ಎಂದೇ ಕರೆದು ಗೌರವಿಸುತ್ತಾರೆ.
ಮಲೆಯಾಳಂ ಬಿಗ್ಬಾಸ್ 6 ಕಳೆದ ವರ್ಷ ಮುಕ್ತಾಯಗೊಂಡಿತ್ತು. ದೈಹಿಕ ತರಬೇತುದಾರ ಜಿಂಟೋ ಅವರು ಚಾಂಪಿಯನ್ ಆಗಿ ಹೊರಹೊಮ್ಮಿ 50 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದರು. ಈ ಸಂದರ್ಭದಲ್ಲಿ ಬಹುಮಾನ ಪ್ರಾಯೋಜಿಸಿದ್ದ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಅವರು ತೆರಿಗೆ ಕಡಿತದ ನಂತರ ಜಿಂಟೋ ಅವರಿಗೆ 34,40,000 ರೂ. ನೀಡಲಾಗಿದೆ ಎಂದು ತಿಳಿಸಿದ್ದರು.