ಬಾಗಲಕೋಟೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವಿಡಿಯೋ ಹೇಳಿಕೆಯೊಂದನ್ನು ರಿಲೀಸ್ ಮಾಡಿದ್ದಾರೆ.
ಇತ್ತೀಚಿಗಷ್ಟೇ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಇದೀಗ ಈ ಸಂಬಂಧ ಸಂತ್ರಸ್ತ ಮಹಿಳೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾನು ಶ್ರೀಗಳ ವಿರುದ್ಧ ದೂರು ನೀಡಿಲ್ಲ. ನನ್ನ ಮತ್ತು ಸ್ವಾಮೀಜಿ ಮೇಲಿರುವ ಆರೋಪಗಳೆಲ್ಲವೂ ಸುಳ್ಳು. ನನ್ನ ಹೆಸರಿನಲ್ಲಿ ಯಾರೋ ದುಷ್ಕರ್ಮಿಗಳು ಅಪಪ್ರಚಾರ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ದೂರು ನೀಡಿದ್ದಾರೆ. ಆದರೆ ನಾನು ದೂರು ನೀಡಿಲ್ಲ. ಟಿವಿಯಲ್ಲಿ ನೋಡಿದಾಗಲೇ ನನಗೆ ಈ ವಿಚಾರ ಗೊತ್ತಾಗಿದ್ದು, ನನ್ನ ಮೇಲೆ ಯಾವುದೇ ತರದ ಲೈಂಗಿಕ ದೌರ್ಜನ್ಯ ಆಗಿಲ್ಲ, ಶ್ರೀಗಳು ತನ್ನ ಜೊತೆಗೆ ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ ಎಂದಿದ್ದಾರೆ.
ಇನ್ನೂ ನಾವು ಶ್ರೀಗಳಿಗೆ ಕೆಟ್ಟ ಶಬ್ದದಿಂದ ಬೈದಿಲ್ಲ. ವಿಜಯಪುರದಲ್ಲಿ ನಡೆದ ಗಲಾಟೆ ಸಮಯದಲ್ಲಿ ನಾನು ಕೇವಲ ಮಾತಾಡಬೇಕು ಎಂದು ಕರೆದಿದ್ದೆ, ಆಗ ನನ್ನ ಸಂಬಂಧಿಯೋರ್ವ ಕೂಗಾಡಿದ್ದ ಅಷ್ಟೇ ಅದರ ಹೊರತಾಯೂ ಬೇರೆ ಏನೂ ನಡೆದಿಲ್ಲ. ನಾನು ಈಗ ಶ್ರೀಗಳ ಬಳಿ ಯಾವುದೇ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಹಣ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ. ನಮ್ಮ ಇಬ್ಬರ ನಡುವೆ ಇರುವುದು ಕೇವಲ ಭಕ್ತೆ ಹಾಗೂ ಗುರುವಿನ ಸಂಬಂಧ ಅಷ್ಟೆ. ಏ.6ಕ್ಕೆ ದೂರು ನೀಡಿರುವುದು ಯಾರು ಎಂಬುದು ನನಗೆ ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಯಾರು ಕೂಡ ಅದನ್ನು ನಂಬಬೇಡಿ. ಸದ್ಯ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನದಲ್ಲಿ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ತನಗೆ ಹಣ ಕೊಡಬೇಕಾದ ಒರ್ವ ವ್ಯಕ್ತಿ ಶ್ರೀಗಳ ಕಾರಿನಲ್ಲಿ ಇದ್ದ. ಆ ವ್ಯಕ್ತಿಗೆ ಹಣ ಕೇಳಿ, ಬೈಯ್ಯಲು ನಾನು ಮತ್ತು ನನ್ನ ಮಗ ವಕೀಲರ ಜೊತೆಗೆ ಹೋಗಿದ್ದೆವು. ಆದರೆ ಜನರು ಇದನ್ನು ನಮಗೂ ಸ್ವಾಮೀಜಿಗೂ ಗಲಾಟೆ ಎಂದು ಬಿಂಬಿಸಿದ್ದಾರೆ. ಈ ಸಂಬಂಧ ನಾನು ಕೈ ಬರಹದಲ್ಲಿ ಪತ್ರ ಬರೆದು ಗೃಹ ಸಚಿವರು, ಸಿಎಂ, ಮಹಿಳಾ ಆಯೋಗ, ಬನಶಂಕರಿ ಪೊಲೀಸ್ ಠಾಣೆ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.

