ಬೆಂಗಳೂರು: ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಪ್ರಕರಣಕ್ಕೆ ಈಗ ಒಂದು ಸ್ಪೋಟಕ ತಿರುವು ಸಿಕ್ಕಿದೆ.
ಕಳೆದ ರಾತ್ರಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರೈಲ್ವೇ ಗೊಲ್ಲಹಳ್ಳಿಯ ಮಾರುತಿ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರದಲ್ಲಿ ಯುವಕನನ್ನು ಬಿಯರ್ ಬಾಟಲುಗಳಿಂದ ಬಡಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಭೈರಶಟ್ಟಿಹಳ್ಳಿ ಗ್ರಾಮದ ನಿವಾಸಿ ಮಾರುತಿ ಕೊಲೆಯಾದ ದುರ್ದೈವಿಯಾಗಿದ್ದು, ಈ ಪ್ರಕರಣಕ್ಕೆ ಹೊಸ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.
ಮಾರುತಿಯನ್ನ ಕೊಲೆ ಮಾಡಿದ ಆರೋಪಿಗಳು ಬಾಲ್ಯದ ಸ್ನೇಹಿತರಾಗಿದ್ದಾರೆ. ಒಂದು ವರ್ಷದ ಹಿಂದೆ ನಡೆದ ಗಲಾಟೆಯನ್ನು ಮನದಲ್ಲಿಟ್ಟು, ಮಾರುತಿಯನ್ನು ಕೊಲೆ ಮಾಡುವುದಾಗಿ ಮೊದಲೇ ತಿಳಿಸಿದ್ದರು ಎಂಬ ಮಾಹಿತಿ ದೊರಕಿದೆ.
ಅಲ್ಲದೆ ರಾತ್ರಿ ಪಾನಮತ್ತರಾಗಿದ್ದ ರವಿ, ಮಂಜುನಾಥ್ ಹಾಗೂ ರಾಜೇಶ್ ಎಂಬುವವರು ಕೊಲೆಯಾದ ಮಾರುತಿಗೆ ಆತನ ತಮ್ಮನ ಧ್ವನಿಯಲ್ಲಿ ಫೋನ್ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ ಎಂದು ಮೃತನ ತಂದೆ ಕೃಷ್ಣಪ್ಪ ಗಂಭೀರವಾದ ಆರೋಪವನ್ನ ಮಾಡಿದ್ದಾರೆ.
ಈ ವೇಳೆ ಕೊಲೆಯಾದ ಮಾರುತಿ ಸ್ನೇಹಿತ ಶಶಿಕುಮಾರ್ ಮೇಲೂ ಈ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ನಾಪತ್ತೆಯಾಗಿದ್ದರು. ಇನ್ನೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು ಓರ್ವ ಆರೋಪಿ ರಾಜೇಶ್ನನ್ನು ಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಇದನ್ನೂ ಓದಿ: ಜಾತ್ರೆಯ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ