ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಕೇವಿಯಟ್ ಅನೂರ್ಜಿತವಾಗಿದೆ. ಈ ಮೂಲಕ ಏಳು ಮಠದ ಯತಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಉಡುಪಿ ಕೃಷ್ಣಮಠದ ಗರ್ಭಗುಡಿಯಲ್ಲಿರುವ ಪಟ್ಟದ ದೇವರನ್ನು ವಾಪಾಸ್ ಕೊಡಿಸಬೇಕು, ನನ್ನ ವಾದವನ್ನೂ ಕೋರ್ಟ್ ಆಲಿಸಬೇಕು ಅಂತ ಸಲ್ಲಿಸಿದ್ದ ಕೇವಿಯಟ್ ಅರ್ಜಿ ಬಿದ್ದು ಹೋಗಿದೆ. ಜುಲೈ 4 ರಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಕೆಯಾಗಿತ್ತು. ಜುಲೈ 19 ರಂದು ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ಕೇವಿಯಟ್ ಅನೂರ್ಜಿತವಾಗಿದೆ.
ಕೇವಿಯಟ್ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಅದು ಅನೂರ್ಜಿತವಾಗುತ್ತದೆ ಎಂಬುದು ಕಾನೂನು. ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ. ಉಳಿದ ಏಳು ಮಠಾಧೀಶರು ಕೋರ್ಟ್ ಮೆಟ್ಟಿಲೇರಿದರೆ ಆ ಸಂದರ್ಭ ನನ್ನ ವಾದವನ್ನೂ ಕೇಳಬೇಕು ಎಂದು ನಮೂದಿಸಲಾಗಿತ್ತು.
ಪಟ್ಟದ ದೇವರನ್ನು ವಾಪಾಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಿರೂರು ಸ್ವಾಮೀಜಿ ಹೇಳಿದ್ದರು. ಇತರೆ ಆರು ಮಠಾಧೀಶರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿರೂರು ಶ್ರೀ ಸಜ್ಜಾಗಿದ್ದರು. ಆದರೆ ಕಳೆದ ಗುರುವಾರ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸದ್ಯ ಪಟ್ಟದ ದೇವರ ವಿಗ್ರಹ ಈಗ ಕೃಷ್ಣಮಠದಲ್ಲಿದ್ದು, ಪರ್ಯಾಯ ಸ್ವಾಮೀಜಿ ದಿನಂಪ್ರತಿ ಪೂಜೆ ಮಾಡುತ್ತಿದ್ದಾರೆ.