ನವದೆಹಲಿ: ಕೆನಡಾದ (Canada) ಬ್ರಾಂಪ್ಟನ್ನಲ್ಲಿರುವ ಹಿಂದೂ (Hindu) ದೇವಾಲಯದ ಮೇಲೆ ಖಲಿಸ್ತಾನ್ (Khalistan) ಪರ ಗುಂಪು ನಡೆಸಿದ ದಾಳಿಯನ್ನು ವಿರೋಧಿಸಿ ಹಿಂದೂ ಮತ್ತು ಸಿಖ್ ಕಾರ್ಯಕರ್ತರು ನವದೆಹಲಿಯ ಕೆನಡಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಬೆನ್ನಲ್ಲೇ ಕೆನಡಾದ ರಾಯಭಾರ ಕಚೇರಿ ಎದುರು ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಆದರೂ ಮೆರವಣಿಗೆ ನಡೆಸುತ್ತಿದ್ದ ಹಿಂದೂ ಸಿಖ್ ಗ್ಲೋಬಲ್ ಫೋರಂನ (Hindu Sikh Global Forum) ಹಲವಾರು ಕಾರ್ಯಕರ್ತರು, ಪೊಲೀಸ್ ಬ್ಯಾರಿಕೇಡ್ಗಳನ್ನು ಏರಲು ಪ್ರಯತ್ನಿಸಿದರು. ಅಲ್ಲದೇ ಅವುಗಳನ್ನು ಕೆಡವಿ ಹಾಕಿದ್ದಾರೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಎರಡೂ ಧರ್ಮದ ಜನರು ‘ಹಿಂದೂಗಳು ಮತ್ತು ಸಿಖ್ಖರು ಒಗ್ಗಟ್ಟಾಗಿದ್ದಾರೆ’ ಮತ್ತು ʻಕೆನಡಾದಲ್ಲಿ ದೇವಸ್ಥಾನಗಳ ಅವಮಾನವನ್ನು ಭಾರತೀಯರು ಸಹಿಸುವುದಿಲ್ಲ’ ಎಂಬ ಬರಹಗಳಿರುವ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ನವೆಂಬರ್ 4 ರಂದು ಕಾನ್ಸುಲರ್ ಕ್ಯಾಂಪ್ ನಡೆಯುತ್ತಿದ್ದಾಗ ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ಮಂದಿರದ ಹೊರಗೆ ಹಲವಾರು ಖಲಿಸ್ತಾನಿ ಬೆಂಬಲಿಗರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯು ಉದ್ದೇಶಪೂರ್ವಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಖಂಡಿಸಿದ್ದರು.