– ಸಿಎಂ ವಿರುದ್ಧ ಸಿಡಿದೆದ್ದ ತ್ರಿಮೂರ್ತಿಗಳು
– 27 ಶಾಸಕರಿಂದ 2 ಬಾರಿ ರಹಸ್ಯ ಸಭೆ
ಬೆಂಗಳೂರು: ರಾಜ್ಯ ಬಿಜೆಲಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೂವರು ನಾಯಕರು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಕಳೆದ ಕೆಲ ದಿನಗಳಿಂದ ಸಿಎಂ ಯಡಿಯೂರಪ್ಪನವರ ವಿರುದ್ಧ ರಹಸ್ಯ ಸಭೆಗಳು ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಬಿಜೆಪಿ ಸರ್ಕಾರ ಪತನವಾಗುತ್ತಾ ಲೆಕ್ಕಾಚಾರಗಳು ರಾಜ್ಯ ರಾಜಕೀಯದಲ್ಲಿ ಆರಂಭಗೊಂಡಿವೆ. ಕೊರೊನಾ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗದರಿದ್ದು, ಉತ್ತರ ಕರ್ನಾಟಕ ಭಾಗದ ಕಮಲ ನಾಯಕರೇ ಸಿಎಂಗೆ ಮುಳುವಾಗ್ತಾರಾ ಅನ್ನೋ ಅನುಮಾನಗಳು ದಟ್ಟವಾಗ್ತಿವೆ.
ಯಾರು ಆ ತ್ರಿಮೂರ್ತಿಗಳು?: ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವ್ಯೂಹ ರಚಿಸಿದ್ದಾರೆ. ಈ ಮೂವರ ನಾಯಕತ್ವದಲ್ಲಿ ಕಳೆದ 15 ದಿನದಲ್ಲಿ ಸುಮಾರು ಆರು ಬಾರಿ ಸಭೆ ನಡೆಸಿ, ಸಿಎಂ ವಿರುದ್ಧದ ಆಪರೇಷನ್ ವೇದಿಕೆಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಟಾರ್ಗೆಟ್ ಯಾಕೆ?: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಶಾಸಕರಾದ ಉಮೇಶ್ ಕತ್ತಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರು ನಾಯಕರು ಬಹಿರಂಗವಾಗಿಯೇ ತಾವು ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದುಂಟು. ಇನ್ನು ಬಿಜೆಪಿ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ, ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದರು. ಆದ್ರೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದೀಗ ಉಮೇಶ್ ಕತ್ತಿ ಮತ್ತು ಯತ್ನಾಳ್ ಇಬ್ಬರು ನಿರಾಣಿಯ ಬೆಂಬಲದೊಂದಿಗೆ ಬಂಡಾಯದ ಬಾವುಟ ಹಿಡಿಯಲು ಸಿದ್ಧರಾಗಲು ಸಭೆಯ ಮೇಲೆ ಸಭೆ ನಡೆಸುತ್ತಿರುವ ವಿಷಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೂವರು ನಾಯಕರು ತಮ್ಮದೇ ಆದ ಪ್ರತ್ಯೇಕ ಬಣ ರಚಿಸಿಕೊಂಡು ಮುಂದೆ ಏನಾಗಬಹುದು ಎಂಬುದರ ಬಗ್ಗೆ ಆಪ್ತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರಂತೆ. ಈ ನಡುವೆ ಜತೆಗೆ ಪರಮಾಪ್ತ ಶಾಸಕನ ಎರಡ್ಮೂರು ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಈ ಕಾರಣದಿಂದಾಗಿ ಯಡಿಯೂರಪ್ಪ ಆಪ್ತ ಬಣವೇ ಯಡಿಯೂರಪ್ಪ ವಿರುದ್ಧ ಕೂಟ ರಚಿಸಲು ಯತ್ನಿಸಲಾಗ್ತಿದೆ ಎಂದು ತಿಳಿದು ಬಂದಿದೆ.