ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೆ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳ ಅಧ್ಯಕ್ಷರ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಕುಸ್ತಿಯೇ ಏರ್ಪಟ್ಟಿದೆ.
ಹೌದು, ಬಿಜೆಪಿಯ ಆಪರೇಷನ್ ಕಮಲದ ತಂತ್ರಕ್ಕೆ, ತಿರುಮಂತ್ರ ರೂಪಿಸುವ ಮೂಲಕ ಬೆಂಗಳೂರಿನ ಬಿಬಿಎಂಪಿ ಮೇಯರ್ ಗಾದಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಉಳುಸಿಕೊಳ್ಳಲು ಯಶಸ್ವಿಯಾಗಿದೆ. ಆದರೆ ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಇದೇ ಪಕ್ಷಗಳು ಕಿತ್ತಾಡಿಕೊಂಡು ಸುದ್ದಿ ಮಾಡಿಕೊಂಡಿವೆ.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಸಚಿವ ಎ.ಮಂಜುರವರ ಪುತ್ರ ಮಂಥರ್ ಗೌಡ ನಡುವೆ ಭಾರೀ ವಾಕ್ಸಮರ ನಡೆದಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಿಗೆ ನಡೆದಿರುವ ಅವಿರೋಧ ಆಯ್ಕೆಯ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭವಾನಿ ರೇವಣ್ಣ ಹಾಗೂ ಮಂಥರ್ ಗೌಡ ನಡುವೆ ಮಾತಿನ ಚಕಮಕಿಯೆ ಏರ್ಪಟ್ಟಿದೆ.
ಅಲ್ಲದೇ ಜೆಡಿಎಸ್ನವರು ತಮಗೆ ಇಷ್ಟ ಬಂದ ಹಾಗೇ, ಜಿಲ್ಲಾ ಪಂಚಾಯಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿನ ಸದಸ್ಯರಿಗೂ ಸಹ ಪ್ರಾಮುಖ್ಯತೆಯನ್ನು ನೀಡಬೇಕು. ಎಂದು ಸದಸ್ಯರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭವಾನಿ ರೇವಣ್ಣರವರು ಸರ್ಕಾರದ ವಿಚಾರ ಇಲ್ಲಿ ಬೇಡ, ಅದಕ್ಕೆ ವಿಧಾನಸೌದ ಇದೆ. ದೊಡ್ಡವರು ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿ ತಿರುಗೇಟು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=i8eQw81yzTs