ಬೀದರ್: ಶುಕ್ರವಾರ ಅಂದ್ರೆ ಶುಭ ದಿನ ಅಂತ ಎಲ್ಲರೂ ಭಾವಿಸ್ತಾರೆ. ಅದಕ್ಕೆ ಸಿನಿಮಾಗಳು ತೆರೆಗೆ ಅಪ್ಪಳಿಸಿದ್ರೆ, ಹಲವೆಡೆ ದೇವಿ ಪೂಜೆ ನಡೆಸ್ತಾರೆ. ಮುಸ್ಲಿಮರು ನಮಾಜ್ ಮಾಡಿ ಪ್ರಾರ್ಥಿಸುತ್ತಾರೆ. ಆದ್ರೆ ಬೀದರ್ ಜಿಲ್ಲೆಯ ಫತ್ತೇಪೂರ್ ಗ್ರಾಮದಲ್ಲಿ ಶುಕ್ರವಾರ ಯಾವುದೇ ಶುಭಕಾರ್ಯಗಳು ನಡೆಯಲ್ಲ.
ಫತ್ತೆಪೂರ್ ಗ್ರಾಮದ ಜನರಿಗೆ ‘ಶುಕ್ರವಾರ’ ಅಂದ್ರೆ ಕರಾಳ ದಿನ. 100 ವರ್ಷದಿಂದ ಇಲ್ಲಿ ಶುಭಕಾರ್ಯ ನಡೆದಿಲ್ಲ ಎಂಬುವುದು ಗ್ರಾಮಸ್ಥರ ಮಾತು. ಇದೆಲ್ಲ ಮೂಢನಂಬಿಕೆ ಅಂತ ಲಕ್ಷ್ಮಿ ಎಂಬವರಿಗೆ ವರ್ಷದ ಹಿಂದೆ ಶುಕ್ರವಾರ ಮದುವೆ ಮಾಡಲಾಯ್ತು. ಮದುವೆ ಮಾಡಿದ 15 ದಿನಗಳಲ್ಲಿ ಲಕ್ಷ್ಮಿ ಸಾವನ್ನಪ್ಪಿದ್ದರು. 3 ವರ್ಷಗಳ ಹಿಂದೆ ಅಣ್ಣರೈ ಎಂಬವರು ಮಗವಿನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದರಿಂದ ಒಂದು ವಾರದಲ್ಲಿ ಅಣ್ಣರೈ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.
ಬಹುಮನಿ ಸಾಮ್ರಾಜ್ಯದ ಕಾಲದಲ್ಲಿ ಮಹಮ್ಮದ್ ಗವಾನನ ಗುರುಗಳಾಗಿದ್ದ ಫಕುರಲ್ ಗಿಲಾನಿ ಕಾರಣಾಂತರದಿಂದ ಮೃತಪಟ್ಟಿದ್ದರು. ಗ್ರಾಮದಲ್ಲೇ ನನ್ನ ಅಂತ್ಯ ಸಂಸ್ಕಾರ ಆಗಬೇಕು ಅಂಥ ಫಕುರಲ್ ಗಿಲಾನಿ ಆಸೆ ಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಬಂದ್ರೆ ಸಾಕು, ಊರ ಜನರನ್ನ ಗಿಲಾನಿ ಶಾಪವಾಗಿ ಕಾಡ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಯಾವುದೊ ಕಾರಣಕ್ಕೆ ಜನರು ಸಾವನ್ನಪ್ಪಿದ್ರೆ ಅದನ್ನ ಶುಕ್ರವಾರಕ್ಕೆ ತಳಕು ಹಾಕಿ ಆತಂಕದಿಂದಿರೋದು ವಿಚಿತ್ರ. ಗ್ರಾಮಸ್ಥರಿಗೆ ವಿಚಾರವಾದಿಗಳು, ಬುದ್ಧಿವಂತರು ಬುದ್ಧಿ ಹೇಳಿ ಮೂಢನಂಬಿಕೆಯನ್ನ ದೂರವಾಗಿಸಬೇಕಿದೆ.