ಬೀದರ್: ನಾನು ಅತೃಪ್ತ ಬಣದಲ್ಲಿ ಇಲ್ಲ. ಆದರೆ ಮೈತ್ರಿ ಸರ್ಕಾರ ನಿಜವಾಗಿಯೂ ಅಪಾಯದಲ್ಲಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ನನಗೆ ಆಚ್ಚರಿ ತಂದಿದೆ. ಈ ಹಿಂದೆ ನನ್ನ ಜೊತೆ ಮಾತನಾಡಿದಾಗ ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದರು. ಅವರ ಈ ನಿರ್ಣಾಯವನ್ನು ನನಗೆ ನಂಬಲು ಆಗುತ್ತಿಲ್ಲ ಎಂದು ತಿಳಿಸಿದರು.
ಇದು ಏಕಾಏಕಿಯಾಗಿ ಆದ ಬೆಳವಣಿಗೆ ಅಲ್ಲ. ಸುಮಾರು 13 ತಿಂಗಳಿನಿಂದ ನಡೆಯುತ್ತಿರುವ ನಿರಂತರ ಪ್ರಕ್ರಿಯೆ ಇದು. ವೈಯಕ್ತಿಕ ಹಿತಾಸಕ್ತಿಗಳನ್ನು ಎಲ್ಲಾ ರಾಜಕಾರಣಿಗಳು ಇಟ್ಟುಕೊಂಡಿರುತ್ತಾರೆ. ನಮ್ಮ ವೈಯಕ್ತಿಕ ಆಸೆಗಳಿಗೆ ತೃಪ್ತಿ ಪಡೆಸಲು ಸಮ್ಮಿಶ್ರ ಸರ್ಕಾರದಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ಅಸಮಾಧಾನ, ಅತೃಪ್ತಿ ಮತ್ತು ಭಿನ್ನಾಭಿಪ್ರಾಯಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಇದ್ದವು ಎಂದು ತಿಳಿಸಿದರು.
ಇದರ ಜೊತೆಗೆ ಮೈತ್ರಿ ಸರ್ಕಾರ ಕೂಡಾ ಶಾಸಕರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರೆ ಈ ರೀತಿ ಆಗುತ್ತಿರಲ್ಲಿಲ್ಲ ಎಂದು ಡಾ.ಕೆ ಸುಧಾಕರ್ ಅವರು ಅಭಿಪ್ರಾಯಪಟ್ಟರು.