ಬೀದರ್: ಬಹುಮತವಿಲ್ಲದೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರದಲ್ಲಿ ಸಿಎಂ ಏನು ಬಹುಮತ ಸಾಬೀತು ಮಾಡುತ್ತಾರೆ ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಆಗುತ್ತೇನೆ ಎನ್ನುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆಯೂ ಇಲ್ಲಾ ಎಂದು ಸಂಸದ ಭಗವಂತ್ ಖೂಬಾ ವಾಗ್ದಾಳಿ ನಡೆಸಿದ್ದಾರೆ.
ನಗರದ ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು, ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಾರೆ. ಇನ್ನು ಕೆಲವರು ಈಗಿರುವ ಸಿಎಂ ಇರಬೇಕು ಎನ್ನುತ್ತಾರೆ. ಇದನ್ನು ನೋಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಗೊಂದಲಗಳು ಇವೆ ಹಾಗೂ ಸ್ವಾರ್ಥವಿದೆ ಎಂದು ಗೊತ್ತಾಗುತ್ತಿದೆ. ರಾಜ್ಯದ ಏಳಿಗೆಯ ಬಗ್ಗೆ ಎರಡು ಪಕ್ಷಗಳು ಸ್ವಲ್ಪವು ಯೋಚನೆ ಮಾಡುತ್ತಿಲ್ಲಾ ಎಂದು ಮೈತ್ರಿ ಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಬೇಕು. ರಿವರ್ಸ್ ಆಪರೇಷನ್ ಮಾಡುತ್ತೇನೆ. ಬೇರೆ ಏನೋ ತಂತ್ರಗಾರಿಕೆ ಮಾಡುತ್ತೇನೆ ಎಂದರೆ ರಾಜ್ಯದ ಜನರಿಗೆ ಇದು ಸರಿ ಬರೋಲ್ಲಾ ಎಂದು ಬಿಜೆಪಿ ಸಂಸದ ಭಗವಂತ್ ಖೂಬಾ ಸಿಎಂ ಹಾಗೂ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.