ರಾಮನಗರ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಜಗತ್ತು ಎಲ್ಲವನ್ನೂ ಸುಲಭಗೊಳಿಸುತ್ತಿದೆ. ಕರೆಂಟ್ ಬಿಲ್, ವಾಟರ್ ಬಿಲ್, ಬೈಕ್ ಇನ್ಸೂರೆನ್ಸ್ ಸೇರಿ ಎಲ್ಲಾ ಸೇವೆಗಳು ಅಂಗೈನಲ್ಲೇ ದೊರಕುತ್ತಿವೆ. ಆದರೆ ಆನ್ಲೈನ್ ಪೇಮೆಂಟ್ ಬಳಕೆ ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿಯೂ ಆಗಿದೆ ಎಂಬುದಕ್ಕೆ ಇಲ್ಲೊಂದು ನಿದರ್ಶನ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬ ಕೇವಲ 15 ರೂ. ಎಲೆಕ್ಟ್ರಿಕ್ ಬಿಲ್ ಪಾವತಿಸಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಡದಿಯ (Bidadi) ರಾಘವೇಂದ್ರ ಲೇಔಟ್ ನಿವಾಸಿ ಮಂಜುನಾಥ್ ಹಣ (Money) ಕಳೆದುಕೊಂಡವರು. ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು ನ. 27ರಂದು ಬೆಳಗ್ಗೆ ಬೆಸ್ಕಾಂ ವಿದ್ಯುತ್ ಬಿಲ್ ಪಾವತಿ ಮಾಡಿದ್ದರು. ಅದಾದ ಬಳಿಕ ಅವರ ಮೊಬೈಲ್ಗೆ (Mobile) ಮತ್ತೊಂದು ಸಂದೇಶ ಬಂದಿದೆ. ನಿಮ್ಮ ವಿದ್ಯುತ್ ಬಿಲ್ ಪಾವತಿ ಪೂರ್ಣಗೊಂಡಿಲ್ಲ. ಇನ್ನೂ 15 ರೂ. ಬಾಕಿ ಇದ್ದು, ಅದನ್ನು ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ನಕಲಿ ಸಂದೇಶವೊಂದು ಬಂದಿದೆ. ಇದನ್ನೇ ಬೆಸ್ಕಾಂನ ಅಧಿಕೃತ ಸಂದೇಶ ಎಂದು ನಂಬಿದ ಮಂಜುನಾಥ್ ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಇತ್ಯಾದಿ ವಿವರಗಳೊಂದಿಗೆ ಹಣ ಪಾವತಿಸಿ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಮಂಜುನಾಥ್ ತಮ್ಮ ಬ್ಯಾಂಕ್ ಖಾತೆಯಲ್ಲಿ 200 ರೂ. ಮೊತ್ತವಷ್ಟೇ ಉಳಿಸಿದ್ದರು. ಅವರು ಆನ್ಲೈನ್ ಮೂಲಕ ಕರೆಂಟ್ ಬಿಲ್ ಪಾವತಿಸಿದ ಅದೇ ದಿನ ರಾತ್ರಿ 8ರ ಸುಮಾರಿಗೆ ಅವರಿಗೆ ಇ-ಮೇಲ್ ಇಂದು ಬಂದಿದೆ. ಅದರಲ್ಲಿ 24 ಲಕ್ಷ ರೂ. ಸಾಲದ ಹಣವನ್ನು ಖಾತೆಗೆ ಹಾಕಿರುವುದಾಗಿ ಸಂದೇಶ ಬಂದಿದೆ. ಆದರೆ ಮಂಜುನಾಥ್ ತಾನು ಸಾಲಕ್ಕೆ ಅರ್ಜಿ ಸಲ್ಲಿಸಿಯೇ ಇಲ್ಲ. ಹೀಗಿರುವಾಗ ಸಾಲ ಕೊಟ್ಟವರು ಯಾರು ಎಂದು ಗೊಂದಲಕ್ಕೆ ಒಳಗಾದ ಮಂಜುನಾಥ್ ತಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಪರಿಶೀಲಿಸಿದಾಗ ಹಣ ಇರುವುದು ಖಾತ್ರಿಯಾಗಿದೆ.
ನಂತರದಲ್ಲಿ ಕೇವಲ 20 ನಿಮಿಷದ ಅವಧಿಯಲ್ಲಿ ತಲಾ 1 ಲಕ್ಷದಂತೆ 7 ಬಾರಿ ಹಣ ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಮಂಜುನಾಥ್ ಕೂಡಲೇ ಬ್ಯಾಂಕಿನ ಗ್ರಾಹಕ ಕರೆ ಮಾಡಿ ತಮ್ಮ ಖಾತೆಯಲ್ಲಿನ ಹಣದ ವ್ಯವಹಾರವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದರಿಂದ ಖಾತೆಯಲ್ಲಿನ ಇನ್ನೂ 17 ಲಕ್ಷ ರೂ. ಕಳ್ಳರ ಪಾಲಾಗುವುದು ತಪ್ಪಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್ಗೆ ಜೀವ ಬೆದರಿಕೆ- ದೂರು ದಾಖಲು
ವಂಚಕರು ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಆನ್ಲೈನ್ನಲ್ಲೇ ಸಾಲ ಕೊಡಿಸಿ, ತಾವೇ ಅದನ್ನು ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಮಂಜುನಾಥ್ ರಾಮನಗರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿರುವ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಜಕಾರಣದಿಂದ ಹಣ ಗಳಿಸಲು ಐಎಎಸ್ ಅಧಿಕಾರಿಗಳು, ರೌಡಿಗಳು ಬರ್ತಾ ಇದ್ದಾರೆ: ಸಂತೋಷ ಹೆಗ್ಡೆ