ಮಡಿಕೇರಿ: ಮಹಾಮಳೆಯಿಂದ ತತ್ತರಿಸಿ ಹೋಗಿರುವ ಜನತೆಯ ಸಹಾಯಕ್ಕೆ ಧಾವಿಸದ ಜಿಲ್ಲಾಡಳಿತದ ವಿರುದ್ಧ ಬಿಗ್ ಬಾಸ್ ಸ್ಪರ್ಧಿ ಭುವನ್ ಮತ್ತು ಹರ್ಷಿಕ ಪೂಣಚ್ಚ ಆಕ್ರೋಶ ಹೊರಹಾಕಿದ್ದಾರೆ.
ಹರ್ಷಿಕಾ ಪೂಣಚ್ಚ ಪ್ರತಿಕ್ರಯಿಸಿ, ನಮ್ಮ ಕುಟುಂಬ ಮುಕ್ಕೋಡ್ಲು ಗ್ರಾಮದಲ್ಲಿ ವಾಸವಾಗಿದ್ದು, ಈಗ ಆ ಗ್ರಾಮದಲ್ಲಿ ನನ್ನ ಕುಟುಂಬದ ಹಾಗೂ ಇನ್ನಿಬ್ಬರ ಮನೆ ಮಾತ್ರ ಸುರಕ್ಷಿತವಾಗಿ ಉಳಿದಿದೆ. ನಮ್ಮ ಕುಟುಂಬದವರ ಮನೆ ಸುರಕ್ಷಿತವಾಗಿದ್ದರಿಂದ ಅಕ್ಕಪಕ್ಕದ ಮನೆಯವರು ನಮ್ಮ ಮನೆಯಲ್ಲೇ ವಾಸವಿದ್ದರು. ಒಂದು ವಾರದಿಂದ ನನ್ನ ಕುಟುಂಬದವರು 40ಕ್ಕೂ ಹೆಚ್ಚು ಮಂದಿಗೆ ಊಟ ಹಾಕಿ ಅಷ್ಟು ಜನರನ್ನು ನೋಡಿಕೊಂಡು ರಕ್ಷಣಾ ತಂಡವನ್ನು ಕಾಯುತ್ತಿದ್ದರು. ಆದರೆ ರಕ್ಷಣಾ ತಂಡ ಬರದಿದ್ದಾಗ ಅವರೇ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಿದರು.
ಎಲ್ಲೋ ಜನರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಿದ್ದಾಗ ಅವರನ್ನು ರಕ್ಷಿಸಲು ನೋಡಬೇಕು. ಅದು ಬಿಟ್ಟು ಹವಾಮಾನ ಸರಿಯಿರಲಿಲ್ಲ, ಹೆಲಿಕಾಪ್ಟರ್ ನನ್ನು ಬಳಸಲಿಲ್ಲ. ನಮ್ಮ ಕುಟುಂಬದವರು ಹಾಗೂ ಉಳಿದ ಮಂದಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಯಾರು ಸಹಾಯಕ್ಕೆ ಬರದೇ ಇದ್ದಾಗ ಅವರೇ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲು ಹೊರ ಬಂದಿದ್ದಾರೆ ಎಂದು ಹೇಳುತ್ತಾ ಜಿಲ್ಲಾಡಳಿತದ ವಿರುದ್ಧ ಹರ್ಷಿಕಾ ಆಕ್ರೋಶ ಹೊರ ಹಾಕಿದರು.
ನಾವು ಒಟ್ಟು 40ಕ್ಕೂ ಹೆಚ್ಚು ಮಂದಿ ಇದ್ದೀವಿ. ನಮ್ಮ ಅಕ್ಕಪಕ್ಕದ ಮನೆಯವರು ನಮ್ಮ ಮನೆಯಲೇ ವಾಸವಿದ್ದರು. 4 ದಿನಗಳವರೆಗೂ ನಮಗೆ ಫೋನ್ ಉಪಯೋಗವಾಗುತ್ತಿತ್ತು. ಬಳಿಕ ನಮಗೆ ಯಾರಿಗೂ ಕರೆ ಮಾಡಲು ಆಗುತ್ತಿರಲಿಲ್ಲ. ಅಲ್ಲದೇ ಮನೆಯಲ್ಲಿ ಊಟ ಮಾಡಲು ಕೂಡ ಏನೂ ಇರಲಿಲ್ಲ. ಮನೆಯ ಹೊರಗೆ ಶಬ್ಧ ಬಂದಾಗ ಹೆಲಿಕಾಪ್ಟರ್ ಬಂತು ಎಂದು ಓಡಿ ಹೋಗಿ ನೋಡುತ್ತಿದ್ದೇವೆ. ಆದರೆ ಹೆಲಿಕಾಪ್ಟರ್ ಬರಲಿಲ್ಲ. ಯಾರೂ ನಮ್ಮ ರಕ್ಷಣೆಗೆ ಬರೆದೇ ಇದ್ದಾಗ ನಾವೇ ಮನೆಯಿಂದ ಹೊರಬಂದು ಮಕ್ಕಳನ್ನು ಹಾಗೂ ವೃದ್ಧರನ್ನು ರಕ್ಷಿಸಿದ್ದೇವೆ ಎಂದು ಹರ್ಷಿಕಾ ಸಂಬಂಧಿಯೊಬ್ಬರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದರು.
ಮೂರು ದಿನದ ಹಿಂದೆ ಬೆಂಗಳೂರಿನಿಂದ ಕೊಡಗಿಗೆ ಬಂದ ನಾವು, ನಮ್ಮನ್ನು ಬಿಡಿ ನಮಗೆ ಅಪಾಯದಲ್ಲಿರುವ ಸ್ಥಳ ಗೊತ್ತು ಎಂದು ಜಿಲ್ಲಾಧಿಕಾರಿಗಳ ಬಳಿ ಕೇಳಿಕೊಂಡೆವು. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ. ನಾವು ಡಿಸಿ ಕಚೇರಿಯಲ್ಲಿ ಕುಳಿತ್ತಿದ್ದಾಗ ಅಲ್ಲಿ 20ಕ್ಕೂ ಹೆಚ್ಚು ಯೋಧರನ್ನು ನಾವು ಕಳುಹಿಸಿದ್ದೇವೆ, ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ಹೆಲಿಕಾಪ್ಟರ್ನನ್ನು ಕಳುಹಿಸಿದ್ದೇವೆ ಎಂದು ನಮಗೆ ಉತ್ತರ ಕೊಟ್ಟಿದ್ದರು. ಆದರೆ ಅಲ್ಲಿಗೆ ಯಾರೂ ಬಂದಿರಲಿಲ್ಲ ಎಂದು ನಮ್ಮ ಕುಟುಂಬದವರು ಹೇಳುತ್ತಿದ್ದಾರೆ ಎಂದು ಬಿಗ್ ಬಾಸ್ ಸ್ಫರ್ಧಿ ಭುವನ್ ಅಸಮಾಧಾನವನ್ನು ಹೊರ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv