ಭೋಪಾಲ್: ಮುಖ್ಯಮಂತ್ರಿಗೆ ಕಳಪೆ ಗುಣಮಟ್ಟದ ಹಾಗೂ ಬಿಸಿ ಆರಿದ ಚಹಾವನ್ನು ನೀಡಿದ್ದ ಕಿರಿಯ ನಾಗರಿಕ ಸರಬರಾಜು ಅಧಿಕಾರಿಯೊಬ್ಬರಿಗೆ ಶೋಕಾಸ್ ನೋಟಿಸ್ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಛತ್ತೀರ್ಪುರ ಜಿಲ್ಲೆಯ ಖಜುರಾಹೊಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿರಿಯ ಅಧಿಕಾರಿಯೊಬ್ಬರು ಕಳಪೆ ಟೀ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚತ್ತರ್ಪುರ, ರಾಜನಗರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಡಿಪಿ ದ್ವಿವೇದಿ ಅವರು, ವಿಐಪಿ ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕೆ ಕಿರಿಯ ಅಧಿಕಾರಿ ರಾಕೇಶ್ ಕನೌಹಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ನೋಟಿಸ್ ಪ್ರಕಾರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮಾವಾರ ಖಜುರಾಹೊ ವಿಮಾನ ನಿಲ್ದಾಣದಲ್ಲಿ ನಾಗರಿಕ ಸಂಸ್ಥೆ ಚುನಾವಣೆ ಪ್ರಚಾರದ ನಿಮಿತ್ತ ಬಂದಿದ್ದರು. ಈ ವೇಳೆ ಸಿಎಂ ಹಾಗೂ ಇತರ ಅತಿಥಿಗಳಿಗೆ ಚಹಾ ಮತ್ತು ಉಪಹಾರವನ್ನು ನೀಡಲಾಗಿತ್ತು. ಆದರೆ ಚಹಾ ಕಳಪೆ ಮಟ್ಟದಿಂದ ಕೂಡಿದ್ದು, ಬಿಸಿ ಇರಲಿಲ್ಲ. ಇದನ್ನೂ ಓದಿ: ನಿಗಮ ಮಂಡಳಿ, ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ವಾಪಸ್
ಖಜುರಾಹೊ ವಿಮಾನ ನಿಲ್ದಾಣದಲ್ಲಿ ಸಿಎಂ ಹಾಗೂ ಇತರ ಅತಿಥಿಗಳಿಗೆ ಚಹಾವನ್ನು ನೀಡಿರುವುದು ಜೆಎಸ್ಒ ವಹಿಸಿಕೊಂಡಿತ್ತು. ಈ ರೀತಿ ಕಳಪೆ ಮಟ್ಟದ ಚಹಾ ನೀಡಿರುವುದು ಜಿಲ್ಲಾಡಳಿತಕ್ಕೆ ಮುಜುಗರದ ವಿಷಯವಾಗಿದೆ. ಮೂರು ದಿನಗಳಲ್ಲಿ ಉತ್ತರವನ್ನು ಕಳುಹಿಸಲು ಜೆಎಸ್ಒಗೆ ಆದೇಶಿಸಲಾಗಿದೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಏಕಪಕ್ಷೀಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್