ಯಾದಗಿರಿ: ಜಿಲ್ಲೆಯಲ್ಲಿ ಭೀಮಾನದಿ ಪ್ರವಾಹಕ್ಕೆ ಯಾದಗಿರಿ ನಗರ (Yadgiri City) ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜನ ತತ್ತರಿಸಿಹೋಗಿದ್ದಾರೆ.
ನದಿಯಲ್ಲಿ ನೀರಿನ (River Water) ಪ್ರಮಾಣ ಹೆಚ್ಚಾಗಿದ್ದು, ನಗರದ ವೀರಭದ್ರೇಶ್ವರ ನಗರ, ವಿಶ್ವರಾಧ್ಯನಗರ ಬಡಾವಣೆಗಳಿಗೆ ರಾತ್ರಿ ನೀರು ನುಗ್ಗಿದ್ದು ನಿವಾಸಿಗಳಿಗೆ ಜಲಕಂಟಕ ಎದುರಾಗಿದೆ. ಮನೆಯಲ್ಲಿ ಸಿಲುಕಿದ ಜನರನ್ನ SDRF ಹಾಗೂ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. 20ಕ್ಕೂ ಹೆಚ್ಚು ಜನರನ್ನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.
ಭೀಮಾ ನದಿ ಪ್ರವಾಹಕ್ಕೆ ಯಾದಗಿರಿಯಲ್ಲಿ ರಸ್ತೆ ಸಂಪರ್ಕಗಳು ಕಡಿತವಾಗಿದ್ದು, ನಾಯ್ಕಲ್ ಗ್ರಾಮದ ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ತುಂಬಿಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ವಾಹನ ಸವಾರರು ಹರಸಾಹಸ ನಡೆಸಿದ್ದಾರೆ. ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಹಲವೆಡೆ ಗ್ರಾಮಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು ಗ್ರಾಮಸ್ಥರು ಪ್ರತಿಯೊಂದಕ್ಕೂ ಪರದಾಡುತ್ತಿದ್ದಾರೆ. ವಡಗೇರಾ ತಾಲೂಕಿನ ಬೆನಕನ ಹಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನದಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಯಾದಗಿರಿಯ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಶಹಾಪುರ ತಾಲೂಕಿನ ಬಲಕಲ್ ಸೇರಿದಂತೆ ನದಿ ಪಾತ್ರದ ವಿವಿಧ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.



