ನಿಖಿಲ್ ಕುಮಾರ್ ಸ್ವಾಮಿ (Nikhil Kumar) ನಟನೆಯ ಹೊಸ ಸಿನಿಮಾದ ಶೂಟಿಂಗ್ ದಾಸನಪುರ ಎಪಿಎಂಸಿ ಜಾಗದಲ್ಲಿ ನಡೆಯುತ್ತಿದೆ. ಚಿತ್ರೀಕರಣ ನಡೆಯುವ ಜಾಗದಲ್ಲಿ ನಟ ದುನಿಯಾ ವಿಜಯ್ (Duniya Vijay) ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ನೋಡುವುದಕ್ಕಾಗಿಯೇ ಅವರು ದಾಸನಪುರದ ಎಪಿಎಂಸಿ ಜಾಗಕ್ಕೆ ಆಗಮಿಸಿದ್ದರು. ತುಂಬಾ ಹೊತ್ತು ಶೂಟಿಂಗ್ (Shooting) ಸೆಟ್ ನಲ್ಲಿ ಕುಳಿತಿದ್ದ ದುನಿಯಾ ವಿಜಯ್, ನಂತರ ಚಿತ್ರೀಕರಣ ಕುರಿತಂತೆ ಮಾತನಾಡಿದರು.
ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಸ್ಕರನ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಲಕ್ಷ್ಮಣ್ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಅನೇಕರು ಶೂಟಿಂಗ್ ಸೆಟ್ಗೆ ಭೇಟಿ ಕೊಟ್ಟು ಕುತೂಹಲವನ್ನಂತೂ ಮೂಡಿಸಿದ್ದಾರೆ.
ಈ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು. ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್ಗೆ ಕರೆತರಲಾಗಿತ್ತು.