ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಭೇಟಿಗೆ ಅವಕಾಶ ಲಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರ ಮಾತಿಗೆ ಭಾರತಿ ವಿಷ್ಣುವರ್ಧನ್ ಕ್ಷಮೆ ಕೋರಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ನಾವು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ತೆರಳಿದ್ದೇವು. ಆದರೆ ಅಂದು ಕಾದು ಕಾದು ವಾಪಸ್ ಆಗಿದ್ದೇವು. ಆ ಬಳಿಕ 3 ದಿನಗಳಲ್ಲಿ ಭೇಟಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ ಆ ಬಗ್ಗೆ ಮಾಹಿತಿ ನೀಡಲಿಲ್ಲ. ಅದ್ದರಿಂದ ಅನಿರುದ್ಧ್ ಅವರಿಗೆ ನೋವುಂಟಾಗಿ ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸ್ಪಷ್ಟನೆ ನೀಡಿದರು.
ಅನಿರುದ್ಧ್ ಅವರು ಎಂದು ಈ ರೀತಿ ಮಾತನಾಡಿದವರಲ್ಲ. ಆದರೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದಲ್ಲಿ 5 ಸಿಎಂ ಬದಲಾದರು ನಿರೀಕ್ಷಿತ ರೀತಿಯಲ್ಲಿ ಕಾರ್ಯ ನಡೆದಿಲ್ಲ. ಈ ಬಗ್ಗೆ ಅವರಿಗೆ ಸಾಕಷ್ಟು ನೋವಿದೆ. ಅದ್ದರಿಂದ ಇಂತಹ ಪದ ಉಪಯೋಗ ಮಾಡಿರಬಹುದು ಅಷ್ಟೇ. ಉದ್ದೇಶ ಪೂರ್ವಕವಾಗಿ ಈ ಬಗ್ಗೆ ಅನಿರುದ್ಧ ಮಾತನಾಡಿಲ್ಲ. ಆದ್ದರಿಂದ ಸಿಎಂ ವರಿಗೆ ನೋವುಂಟಾಗಿದ್ದೆ ಅನಿರುದ್ಧ್ ಪರವಾಗಿ ನಾನು ಸಿಎಂ ಬಳಿ ಈ ಮೂಲಕ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.
ಮೈಸೂರಲ್ಲೇ ಸ್ಮಾರಕ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ. ಆದ್ದರಿಂದ ಅಲ್ಲೇ ಅದನ್ನು ಪೂರ್ಣಗೊಳಿಸಬೇಕು. ಸಿಎಂ ಅವರಿಗೆ ನಾನು ಕೂಡ ಈ ಬಗ್ಗೆ ಮನವಿ ಮಾಡುತ್ತೇನೆ. ಈ ಕುರಿತು ಉಂಟಾಗಿರುವ ತೊಂದರೆಯನ್ನು ನಿವಾರಣೆ ಮಾಡಿ ಸ್ಮಾರಕ ನಿರ್ಮಾಣ ಕಾರ್ಯ ಪುನರ್ ಆರಂಭವಾಗುವಂತೆ ಮಾಡಲು ಅವಕಾಶ ಮಾಡಿಕೊಡ ಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕೆಲ ಅಭಿಮಾನಿಗಳು ವಿಷ್ಣುವರ್ಧನ್, ಅಂಬರೀಶ್ ಹಾಗೂ ರಾಜ್ಕುಮಾರ್ ಅವರ ಸ್ಮಾರಕ ಒಂದೇ ಸ್ಥಳದಲ್ಲಿ ನಿರ್ಮಾಣ ಆಗಲಿ ಎಂಬ ಇಟ್ಟಿದ್ದ ಬೇಡಿಕೆ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರು ಸ್ಪಷ್ಟನೆಯನ್ನು ನೀಡಿದ್ದು, ಈಗಾಗಲೇ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಆಗಿರುವುದರಿಂದ ಮತ್ತೆ ಅದರ ಸ್ಥಳಾಂತರದ ಚರ್ಚೆ ಬೇಡ. ಈ ಬಗ್ಗೆ ಚರ್ಚೆ ಮಾಡಲು ನಮಗೆ ಇಷ್ಟವಿಲ್ಲ. ಏಕೆಂದರೆ ಅದಕ್ಕೆ ಕಾಲಾವಕಾಶ ಅಂತ್ಯವಾಗಿದೆ. ಕೆಲವರು ಸ್ಮಾರಕದ ಬಗ್ಗೆ ಕೋರ್ಟ್ ಮೆಟ್ಟಿಲು ಹತ್ತಿದ್ದು, ಸಿಎಂ ಅವರು ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಂಡರೆ ಒಳಿತು. ನಾನು ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ನಡೆಸಲು ಸಿದ್ಧಳಾಗಿದ್ದೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv