– ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ ಎಂದು ಶಾಸಕ ಎಚ್ಚರಿಕೆ
ಮಂಗಳೂರು: ರಾಹುಲ್ ಗಾಂಧಿಗೆ (Rahul Gandhi) ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಶಾಸಕ ಭರತ್ ಶೆಟ್ಟಿ (Bharat Shetty) ಕೆಂಡಾಮಂಡಲವಾಗಿದ್ದಾರೆ.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂ ವಿರೋಧಿ (Anti Hindu) ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮಂಗಳೂರಿನಲ್ಲಿಂದು (Mangaluru) ಬಿಜೆಪಿ ಯುವಮೋರ್ಚಾ ಘಟಕ ಪ್ರತಿಭಟನೆ ನಡೆಸಿತು. ಮಳೆಯನ್ನೂ ಲೆಕ್ಕಿಸದೇ ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆ (BJP Protest) ವೇಳೆ ಬಂದ ಶ್ವಾನವನ್ನು ತೋರಿಸಿ ರಾಹುಲ್ ಗಾಂಧಿಗೆ ಹೋಲಿಸಿ ಲೇವಡಿ ಮಾಡಿದರು. ಅಲ್ಲದೇ ರಾಹುಲ್ ಗಾಂಧಿ ಪ್ರತಿಕೃತಿ ಧಹಿಸಿ ಆಕ್ರೋಶ ಹೊರಹಾಕಿದರು.
ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಬೇಕು, ಆಗ ಎಲ್ಲವೂ ಸರಿಹೋಗುತ್ತೆ. ಆಗ ಇದಕ್ಕೆ ಏಳೆಂಟು ಎಫ್ಐಆರ್ ದಾಖಲಾಗ್ತಿತ್ತು ಅಷ್ಟೇ ಎಂದರಲ್ಲದೇ ಮಂಗಳೂರಿಗೆ ಬಂದ್ರೆ ನಾವೇ ಅದಕ್ಕೆ ವ್ಯವಸ್ಥೆ ಮಾಡ್ತೀವಿ ಎಂದು ನುಡಿದಿದ್ದಾರೆ.
ಶಿವ 3ನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾರೆ:
ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದರು. ಆ ಹುಚ್ಚನಿಗೆ ಶಿವ 3ನೇ ಕಣ್ಣು ಬಿಟ್ಟರೇ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವರು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾರೆ. ನಾವು ಅವನಿರಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ? ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದೂಗಳು ಮನೆಯಿಂದಾಚೆ ಕಾಲಿಡಲು ಆಗಲ್ಲ:
ಹಿಂದೂ ಧರ್ಮ ರಕ್ಷಿಸೋದು, ಮಠ, ಮಂದಿರ ಕಾಪಾಡೋದು ನಮ್ಮ ಕರ್ತವ್ಯ. ಹಿಂದೂ ಮತ್ತು ಹಿಂದುತ್ವ ಬೇರೆ ಎಂಬ ಥಿಯರಿ ಹೇಳೋದಕ್ಕೆ ಕಾಂಗ್ರೆಸ್ನವರು ಶುರು ಮಾಡಿದ್ದಾರೆ. ಇಂತಹ ನಾಯಕರನ್ನ ಸಾಕಿದ್ರೆ ಹಿಂದೂಗಳಿಗೆ ಮುಂದೆ ಅಪಾಯವಿದೆ. ಮುಂದಿನ 10, 15 ವರ್ಷಗಳಲ್ಲೇ ಕಾಂಗ್ರೆಸ್ ನಾಯಕರು ಹಿಂದೂಗಳು ಮನೆಯಿಂದ ಹೊರಗೆ ಕಾಲಿಡಲು ಆಗದಂತ ಸ್ಥಿತಿ ನಿರ್ಮಾಣ ಮಾಡ್ತಾರೆ. ಆಗ ಕಾಂಗ್ರೆಸ್ನಲ್ಲಿರುವ ಹಿಂದೂ ನಾಯಕರಿಗೆ ಬಜರಂಗದಳ, ಆರ್ಎಸ್ಎಸ್ ಬೇಕು ಅನ್ನಿಸುತ್ತೆ. ಆದ್ದರಿಂದ ಇಂತಹ ವ್ಯಕ್ತಿಗಳಿಗೆ ಮಣೆಹಾಕಬೇಡಿ ಎಂದು ಕರೆ ನೀಡಿದ್ದಾರೆ.
ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ:
ರಾಹುಲ್ ಗಾಂಧಿ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾರೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾರೆ. ಅಂತಹ ದೊಡ್ಡ ಹುಚ್ಚರು ಅವರು. 99 ಸೀಟು ಗೆದ್ದು ಏನೋ ಸಾಧನೆ ಮಾಡಿದ್ದೇವೆ ಅನ್ನೋ ತರ ಅವರು ಮಾತಾಡ್ತಾರೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ. ಶಸ್ತ್ರಾಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೇ ಆಗ ಅವರು ಸರಿಯಾಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.