ಹೈದರಾಬಾದ್: 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಷ್ಟ್ರ ಸಮಿತಿ (TRS) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರು ಬುಧವಾರ ರಾಷ್ಟ್ರೀಯ ಪಕ್ಷವನ್ನು (national party) ಪ್ರಾರಂಭಿಸಿದ್ದಾರೆ. ಹೊಸದಾಗಿ ಪ್ರಾರಂಭವಾದ ರಾಷ್ಟ್ರೀಯ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಎಂದು ಹೆಸರಿಡಲಾಗಿದೆ.
ಇಂದು ತೆಲಂಗಾಣ ಭವನದಲ್ಲಿ ನಡೆದ ಟಿಆರ್ಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಯಿತು. ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ್ ರಾಷ್ಟ್ರ ಸಮಿತಿ (BRS) ಎಂದು ಮರುನಾಮಕರಣ ಮಾಡಲಾಗಿದೆ. ಟಿಆರ್ಎಸ್ ಅನ್ನು ಭಾರತ ರಾಷ್ಟ್ರ ಸಮಿತಿಯಾಗಿ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವುದನ್ನು ಪಕ್ಷದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದರು.
ಟಿಆರ್ಎಸ್ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾದರೂ ಅದರ ಧ್ವಜ ಅದೇ ಈ ಹಿಂದಿನ ಕಾರಿನ ಚಿಹ್ನೆಯನ್ನೇ ಉಳಿಸಿಕೊಳ್ಳಲಿದೆ. ಆದರೆ ಭಾರತದ ನಕ್ಷೆಯ ರೂಪರೇಖೆಯನ್ನು ಹೊಂದಿರುತ್ತದೆ ಎಂದು ತೆಲಂಗಾಣ ಗೃಹ ಸಚಿವ ಮಹಮ್ಮದ್ ಅಲಿ ತಿಳಿಸಿದರು.