ಹುಬ್ಬಳ್ಳಿ: ಬಂದ್ ಮಾಡಿ ಜನರಿಗೆ ತೊಂದರೆ ನೀಡುವ ಕೆಲಸ ಮಾಡಬಾರದು. ಜನರು ಈಗಷ್ಟೇ ಕೊರೊನಾ ಹೊಡೆತದಿಂದ ಚೇತರಿಸಿ ಕೊಳ್ಳುತ್ತಿದ್ದಾರೆ. ಬಂದ್ನಿಂದ ಜನರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಕೆಎಲ್ಇ ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಭಾರತ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ. ನಿಮ್ಮ ವೈಚಾರಿಕತೆಯ ಹಿನ್ನೆಲೆಯಲ್ಲಿ ಹೋರಾಟ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿಯಾಗಿದೆ. ಅಲ್ಲದೇ ಬಿಜೆಪಿ ಆಡಳಿತ ನೋಡಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಹತಾಶರಾಗಿದ್ದಾರೆ. ಅವರು ಈ ಹಿಂದೆ ನಿಭಾಯಿಸಿದ ಸ್ಥಾನಕ್ಕೂ ಈಗ ನಡೆದುಕೊಳ್ಳದ್ದಕ್ಕೂ ತಕ್ಕದಲ್ಲ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ
ಭಾರತ ಬಂದ್ ಗೆ ಕಾಂಗ್ರೆಸ್ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಧಿವೇಶನದಲ್ಲಿಯೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ವಿಪಕ್ಷವಾಗಿ ಭಾರತ ಬಂದ್ ಗೆ ಬೆಂಬಲ ನೀಡುತ್ತಿದೆ ಎಂದರು.