ಬೆಂಗಳೂರು: ಭಾರತ್ ಬಂದ್ ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೇ ರಾಜ್ಯ ಸರ್ಕಾರಕ್ಕೂ ಅನ್ವಯಿಸುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ತೈಲ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿರುವ ಭಾರತ್ ಬಂದ್ ವೇಳೆ ಎಮ್ಮೆ ಮೇಲೆ ಬಂದು ವಿನೂತನವಾಗಿ ವಾಟಾಳ್ ನಾಗರಾಜ್ ಪ್ರತಿಭಟಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಭಾರತ್ ಬಂದ್ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ, ಇದು ರಾಜ್ಯ ಸರ್ಕಾರಕ್ಕೂ ಅನ್ವಯಿಸುತ್ತದೆ. ಮೊದಲು ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ಸೆಸ್ ದರವನ್ನು ಕಡಿಮೆ ಮಾಡಬೇಕು. ಒಂದು ವೇಳೆ ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡಿದ್ದೇ ಆದರೆ, ನಿಮ್ಮ ವಿರುದ್ಧವು ಪ್ರತಿಭಟಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತೈಲ ದರ ಹಾಗೂ ಅಡುಗೆ ಅನಿಲಗಳ ದರಗಳನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಬಂದ್ ಮಾಡಲು ನಿರ್ಧಾರ ಮಾಡಿದ್ದೆವು. ಆದರೆ ಅಷ್ಟೋತ್ತಿಗೆ ಕಾಂಗ್ರೆಸ್ ಭಾರತ್ ಬಂದ್ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 2 ಸಾವಿರ ಕನ್ನಡಪರ ಸಂಘಟನೆಗಳು ಕಾಂಗ್ರೆಸ್ ಕರೆ ನೀಡಿದ್ದ ಬಂದ್ಗೆ ಬೆಂಬಲ ನೀಡಿವೆ ಎಂದು ಹೇಳಿದರು.
ಇಂದು ಎಮ್ಮೆ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ತೈಲ ಏರಿಕೆ ನೀತಿಯನ್ನು ವಿರೋಧಿಸಿದ್ದೇವೆ. ಕೇಂದ್ರ ಪೆಟ್ರೋಲ್, ಡಿಸೇಲ್ ಹಾಗೂ ಅನಿಲ ದರಗಳಿಗೆ ವೈಜ್ಞಾನಿಕ ರೀತಿಯ ಬೆಲೆ ನಿಗದಿಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕುಸಿದು ಬಿದ್ದಿದೆ. ಅವರದ್ದು ಪೈಸಾ ಸರ್ಕಾರ, ಇದೇ ರೀತಿ ಮುಂದುವರಿದರೆ ದೇಶದಲ್ಲಿ ದಂಗೆ ಏಳುತ್ತದೆ ಎಂದು ಎಚ್ಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv