ಹಾಸನ: ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿಸಿ ನಾಗೇಶ್ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಭಗವದ್ಗೀತೆಯನ್ನು ಕುಟುಂಬದಲ್ಲೇ ನಮ್ಮ ತಂದೆ-ತಾಯಿ, ಹಿರಿಯರು ಹೇಳಿಕೊಡುತ್ತಾರೆ. ಸರ್ಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ಕಟ್ಟಿಕೊಡುವುದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತಹ ವಿಚಾರಗಳು, ಪಠ್ಯಗಳು ಶಾಲೆಗಳಲ್ಲಿ ಇರಬೇಕು ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್ಡಿಡಿ
ನಾನು ಹಿಂದೂ ಬಂಧುಗಳಲ್ಲಿ ಮನವಿ ಮಾಡುತ್ತೇನೆ. ನಾನು ಹುಟ್ಟಿರುವುದೂ ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬ ದೈವದಲ್ಲಿ ಬಹಳ ನಂಬಿಕೆ ಇಟ್ಟು ಶ್ರದ್ಧೆಯಿಂದ ನಡೆದುಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನಮ್ಮ ಮಕ್ಕಳಿಗೆ ಬೇಕಿರುವುದು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಣ. ಮೊದಲು ಆ ಕಡೆ ಗಮನ ಕೊಡಿ ಎಂದು ಹೇಳಿದರು.
ರಾಜ್ಯದಲ್ಲಿ ಕೇವಲ ಮತಬ್ಯಾಂಕ್ಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಒಂದು ಕಾಲದಲ್ಲಿ ವಿದ್ಯೆ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೇರಿದ್ದು ಎನ್ನುವ ವಾತಾವರಣ ಇತ್ತು. ಇಂದು ಅದೇ ವರ್ಗದ ಜನರು ಈ ರೀತಿಯ ವಾತಾವರಣ ಎಲ್ಲರ ಮೇಲೂ ಹೇರಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ಮಕ್ಕಳು ತಮ್ಮ ಜ್ಞಾನ ಬೆಳೆಸಿಕೊಳ್ಳಲು, ಉತ್ತಮ ವಿದ್ಯಾಭ್ಯಾಸ ಮಾಡಲು ಸಾಕಷ್ಟು ನ್ಯೂನತೆಗಳಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳಿವೆ. ಮೊದಲು ಅವುಗಳನ್ನು ಸರಿ ಮಾಡಬೇಕು. ಇದನ್ನು ಮಾಡುವುದು ಬಿಟ್ಟು ಸೂಕ್ಷ್ಮ ವಿಷಯಗಳನ್ನು ಕೆದಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ
ಭಗವದ್ಗೀತೆಯಲ್ಲಿ ಇರುವುದು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು. ಅರ್ಜುನ ಸಂಬಂಧಗಳ ವ್ಯಾಮೋಹಕ್ಕೆ ಸಿಲುಕಿ ಯುದ್ಧ ಮಾಡಲು ನಿರಾಕರಿಸಿ ಶಸ್ತ್ರ ತ್ಯಜಿಸಲು ಮುಂದಾದಾಗ ಶ್ರೀಕೃಷ್ಣ ಪರಮಾತ್ಮ ಆತನ ಕರ್ತವ್ಯಗಳನ್ನು ನೆನಪಿಸುತ್ತಾನೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೇ. ಕುಟುಂಬದಲ್ಲಿ ನೆಮ್ಮದಿ, ಸಾಮರಸ್ಯದ ಜೀವನ ಬೇಕು. ದೊಡ್ಡವರು ಚಿಕ್ಕವರೆನ್ನುವ ಗೌರವಭಾವನೆ ಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಸಮಸ್ಯೆಗಳು ಸಾಕಷ್ಟು ಇವೆ. ರೈತರ ಕಷ್ಟಗಳು ದೊಡ್ಡ ಪ್ರಮಾಣದಲ್ಲಿ ಇವೆ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಸಲಹೆ ನೀಡಿದರು.