ಬೆಂಗಳೂರು: ಪೌರತ್ವ ಕಾಯ್ದೆಯನ್ನ ವಿರೋಧಿಸಿ ಇಂದು ಸಂಜೆ ಬೃಹತ್ ಪ್ರತಿಭಟನಾ ಸಭೆಯನ್ನು ಗೋರಿಪಾಳ್ಯದ ಈದ್ಗಾ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು.
ಸಿಎಎ ವಿರುದ್ಧ ಮಹಿಳೆಯರ ಪ್ರತಿಭಟನೆಯನ್ನ ಶಾಸಕ ಜಮೀರ್ ಅಹ್ಮದ್ ಖಾನ್ ಆಯೋಜನೆ ಮಾಡಿದ್ದರು. ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ ಸಾವಿರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಜಮೀರ್ ಅಹ್ಮದ್ ಅವರು, ರಸ್ತೆ ಪಕ್ಕದಲ್ಲಿದ್ದ ಸ್ಮಶಾನದ ಕಾಂಪೌಂಡ್ ಗೋಡೆ ಏರಿ ನಿಂತು ಪ್ರತಿಭಟನಾ ಸಭೆಗೆ ಬರುವವರನ್ನು ಬೇಗ ಬೇಗ ಬನ್ನಿ ಎಂದು ಕರೆದರು.
ಇದೇ ವೇಳೆ ಮೈದಾನಕ್ಕೆ ಆಗಮಿಸುತ್ತಿದ್ದ ಮಹಿಳೆಯರನ್ನು ಜಮೀರ್ ಅಹ್ಮದ್ ಖಾನ್, ಪೊಲೀಸರ ರೀತಿ ರೋಡ್ನಲ್ಲಿ ನಿಂತು ಕೈಯಲ್ಲಿ ಪ್ಲಾಸ್ಟಿಕ್ ಪೈಪ್ ಹಿಡಿದು ಸರದಿ ಸಾಲಿನಲ್ಲಿ ಬರುವಂತೆ ಕಂಟ್ರೋಲ್ ಮಾಡುತ್ತಿದ್ದರು.