ಬೆಂಗಳೂರು: ಎಲ್ಲರ ಸಹಕಾರದಿಂದ ಕರ್ನಾಟಕ ಮಾದರಿ ರಾಜ್ಯ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ತನ್ನ 78ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟು ವರ್ಷವಾದರೂ ರೈತ ಸಂಕಷ್ಟದಲ್ಲಿರುವುದು ನಮಗೆ ಗೌರವ ತರುವುದಿಲ್ಲ. ನೀರಾವರಿ ಪರಿಸ್ಥಿತಿ, ರೈತರ ಪರಿಸ್ಥಿತಿ ಸುಧಾರಿಸಬೇಕು. ಇದಕ್ಕೆ ಸಿದ್ದರಾಮಯ್ಯ ಅವರ ಸಹಕಾರ ಅಗತ್ಯ ಎಂದು ಹೇಳಿದರು.
ನನ್ನ 60ನೇ ಜನ್ಮದಿನ ಸ್ಮರಣೀಯವಾಗಿತ್ತು. 60ನೇ ಜನ್ಮದಿನದಂದು ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ದರು. ನನಗೂ ನನ್ನ ಶ್ರೀಮತಿಯವರಿಗೂ ವಾಜಪೇಯಿ ಸನ್ಮಾನ ಮಾಡಿದ್ದರು. ಆ ಕಾರ್ಯಕ್ರಮ ಬಳಿಕ ಇವತ್ತಿನ ಕಾರ್ಯಕ್ರಮ ಸ್ಮರಣೀಯವಾಗಿದ್ದು ರಾಜನಾಥ್ ಸಿಂಗ್ ಅವರು ಬಂದಿದ್ದು ಬಹಳ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅನಂತ್ ಕುಮಾರ್ ಇರಬೇಕಿತ್ತು. ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅನಂತ್ ಕುಮಾರ್ ಶ್ರಮವೂ ಕಾರಣ ಎಂದು ಬಿಎಸ್ವೈ ಸ್ಮರಿಸಿಕೊಂಡರು.
ಸಿದ್ದರಾಮಯ್ಯ ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷವಾಗಿದ್ದು ಸಿದ್ದರಾಮಯ್ಯ ಆತ್ಮೀಯತೆ ತೋರಿದ್ದಕ್ಕೆ ಅವರಿಗೆ ಋಣಿ ಆಗಿದ್ದೇನೆ. ಸಿದ್ದರಾಮಯ್ಯ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.