ಬೆಂಗಳೂರು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಪ್ರಶಾಂತ್ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಆಶಾ (30) ಎಂದು ಗುರುತಿಸಲಾಗಿದೆ. 15 ವರ್ಷಗಳ ಹಿಂದೆ ಆಶಾಳಿಗೆ ಸತ್ಯನಾರಾಯಣ ಎಂಬಾತನ ಜೊತೆ ವಿವಾಹವಾಗಿತ್ತು. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಸತ್ಯನಾರಾಯಣ, ತನ್ನ ಪತ್ನಿ ಜೊತೆ ಯುಎಸ್ಎನಲ್ಲಿ ನೆಲೆಸಿದ್ದು 6 ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾಗಿದ್ದರು.
ಅಮೆರಿಕದಿಂದ ಬಂದು ಮೃತ ಆಶಾ ಮತ್ತು ಪತಿ ಸತ್ಯನಾರಾಯಣ ಪ್ರಶಾಂತ್ ನಗರದಲ್ಲಿ ನೆಲೆಸಿದ್ದರು. ಆದರೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಆಶಾ ನೇಣಿಗೆ ಶರಣಾಗಿದ್ದಾರೆ. ಈ ವಿಚಾರವಾಗಿ ಗಂಡ ಸತ್ಯನಾರಾಯಣ ವಿರುದ್ಧ ಆಶಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸತ್ಯನಾರಾಯಣನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ.