ಬೆಂಗಳೂರು: ನಗರದ ಹಲವೆಡೆ ಕಸದ ರಾಶಿ ಬಿದ್ದಿದೆ. ಇದು ಕಸ ವಿಲೇವಾರಿ ಮಾಡಲು ಇದ್ದ ಏಕೈಕ ಕ್ವಾರಿ ಮಿಟಗಾನಹಳ್ಳಿ ಕಸದ ಪಿಟ್ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಇದರಿಂದ ಬುಧವಾರ ನಗರದಿಂದ ಕಸ ತುಂಬಿಸಿ ಹೊರಟಿದ್ದ ಕಾಂಪ್ಯಾಕ್ಟರ್ ಗಳ ಕಸ ವಿಲೇವಾರಿಯಾಗದೆ ಕ್ವಾರಿ ಬಳಿ ಸಾಲು ಗಟ್ಟಿ ನಿಂತಿದೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮಿಟಗಾನಹಳ್ಳಿ ಕ್ವಾರಿ ಪಕ್ಕದಲ್ಲೇ ಮತ್ತೊಂದು ಗುಂಡಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಮಧ್ಯಾಹ್ನದ ಬಳಿಕ ಆ ಕ್ವಾರಿ ಕಸ ಸುರಿಯಲು ಸಿದ್ಧವಾಗುತ್ತದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.
ಈ ತಾತ್ಕಾಲಿಕ ಕ್ವಾರಿ ಸಹ ಮೂವತ್ತು ದಿನಕ್ಕೆ ಭರ್ತಿಯಾಗಲಿದೆ. ಈಗಾಗಲೇ ಪಾಲಿಕೆ ಕರೆದಿರುವ ಮಿಟಗಾನಹಳ್ಳಿ ಭೂಭರ್ತಿ ಕೇಂದ್ರದ ವೈಜ್ಞಾನಿಕ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಹೀಗಾಗಿ ಸರ್ಕಾರ ಸೂಚಿಸಿದಂತೆ ಅಗತ್ಯ ಬಿದ್ದರೆ ಮರುಟೆಂಡರ್ ಕರೆಯುವುದಾಗಿ ರಂದೀಪ್ ತಿಳಿಸಿದರು.
ಬಿಬಿಎಂಪಿ ಕರೆದಿದ್ದ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದು ಮಾಡಿರುವ ಕಾರಣ ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದೆ. ಇಂದು ಅನೇಕ ಕಡೆಗಳಲ್ಲಿ ಕಸ ವಿಲೇವಾರಿಯಾಗದೆ ಹಾಗೇ ಉಳಿದಿವೆ. ಸರ್ಕಾರ ಆದಷ್ಟು ಬೇಗ ಕ್ರಮಕೈಗೊಳ್ಳದಿದ್ದರೆ ಕಸದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಾಗಿದೆ.