ಬೆಂಗಳೂರು: ಭಾರೀ ಗೊಂದಲ, ವಿವಾದಕ್ಕೆ ಕಾರಣವಾಗಿದ್ದ ಕಡ್ಡಾಯ ವರ್ಗಾವಣೆ ನೀತಿಗೆ ರಾಜ್ಯ ಸರ್ಕಾರ ಕೊನೆಗೂ ತಿಲಾಂಜಲಿ ಹಾಡಿದೆ.
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ವಿಧಾನ ಪರಿಷತ್ನಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರ ಸಹಿಯೊಂದು ಬಾಕಿ ಇದೆ. ರಾಜ್ಯಪಾಲರ ಸಹಿ ಬಳಿಕ ಬಹಳ ವರ್ಷಗಳ ಶಿಕ್ಷಕರ ವರ್ಗಾವಣೆ ಗೊಂದಲಕ್ಕೆ ತೆರೆ ಬೀಳಲಿದೆ.
ವಿಧಾನ ಪರಿಷತ್ ನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ 2020ನ್ನ ಮಂಡನೆ ಮಾಡಿದರು. ಕಡ್ಡಾಯ ವರ್ಗಾವಣೆ ಅನ್ನೋದು ದೊಡ್ಡ ಸಮಸ್ಯೆ ಆಗಿದೆ. ನೂರಾರು ಶಿಕ್ಷಕರಿಗೆ ಈ ಕಡ್ಡಾಯ ವರ್ಗಾವಣೆ ಶಿಕ್ಷೆಯಾಗಿ ಪರಿಣಮಿಸಿದೆ. ಕಡ್ಡಾಯ ವರ್ಗಾವಣೆಯಿಂದ ಸಾಕಷ್ಟು ಜನ ನೊಂದಿದ್ದಾರೆ. ಇಂತಹ ವರ್ಗಾವಣೆ ನೀತಿಯನ್ನು ಬದಲಾವಣೆ ಮಾಡಲು ಸರ್ಕಾರ ಈ ವಿಧೇಯಕ ಜಾರಿಗೆ ತರುತ್ತಿದೆ ಅಂತ ವಿಧೇಯಕದ ಬಗ್ಗೆ ಸಚಿವರು ವಿವರಣೆ ನೀಡಿದರು.
ವಿಧೇಯಕ ಮಂಡನೆ ಬಳಿಕ ಸದಸ್ಯರಾದ ಹೊರಟ್ಟಿ, ಮರಿತಿಬ್ಬೇಗೌಡ, ಮಟ್ಟೂರ್, ಅರುಣ್ ಶಹಾಪುರ, ಸಂಕನೂರು, ತೇಜಸ್ವಿನಿ ರಮೇಶ್ ಸೇರಿದಂತೆ 17 ಜನ ಸದಸ್ಯರು ವಿಧೇಯಕದ ಮೇಲೆ ಚರ್ಚೆ ಮಾಡಿದರು. ಅಲ್ಲದೆ ವಿಧೇಯಕದ ಬಗ್ಗೆ ಅನೇಕ ಸಲಹೆ ಸೂಚನೆ ನೀಡಿದರು. ವಿಧೇಯಕ ಅಂಶಗಳನ್ನ ರಚಿಸುವಾಗ ಸದಸ್ಯರ ಎಲ್ಲಾ ಸಲಹೆ ಸ್ವೀಕಾರ ಮಾಡೋದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸಚಿವರ ಮಾತಿಗೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಚರ್ಚೆ ಬಳಿಕ ವಿಧೇಯಕವನ್ನ ಧ್ವನಿಮತದ ಮೂಲಕ ಸರ್ವಾನುಮತದಿಂದ ವಿಧೇಯಕ ಆಂಗೀಕಾರವಾಯಿತು.