ಬೆಂಗಳೂರು: ಸಿಎಂಗೆ ಮಾನ, ಮರ್ಯಾದೆ ಇದ್ದರೆ ಸಂತೆ ಭಾಷಣ ಬಿಟ್ಟು ಬಹುಮತ ಸಾಬೀತು ಮಾಡಲಿ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಮುಖ್ಯಮಂತ್ರಿಯವರಿಗೆ ಸವಾಲು ಹಾಕಿದ್ದಾರೆ.
ಇಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಯ ಮುಖ್ಯಮಂತ್ರಿ ಅವರಿಗೆ ಪ್ರಮಾಣ ವಚನ ಬೋಧನೆ ಮಾಡಿರುವುದು ಗವರ್ನರ್. ಅವರ ಮುಂದೆ ಬಹುಮತ ಸಾಬೀತು ಮಾಡಲಿ ಎಂದು ಹೇಳಿದರು.
ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಆರಂಭವಾಗಿದೆ. ಜೆಡಿಎಸ್ ಪಕ್ಷಕ್ಕೆ ತಲೆಬುಡವಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಹ ಮೌನವಹಿಸಿ ಸುಮ್ಮನೆ ಕಾಲಹರಣ ಮಾಡುತ್ತಿದೆ. ಈ ರೀತಿಯ ವಿಚಾರದಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿಯಗುವಂತಹ ನಡೆ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸದನದಲ್ಲಿ ಶಾಸಕ ಶ್ರೀನಿವಾಸ್ಗೌಡ ಬಿಜೆಪಿ ನನಗೆ ಹಣದ ಆಮಿಷವನ್ನು ನೀಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಈ ವಿಚಾರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿರುವ ಸಂಬಂಧ ಶ್ರೀನಿವಾಸ್ಗೌಡಗೆ ಮೂರು ಬಾರಿ ನೊಟೀಸ್ ನೀಡಲಾಗಿತ್ತು. ಅವರು ಎಸಿಬಿಗೆ ಉತ್ತರಿಸಲಾಗದೇ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎಂದು ಹೇಳಿದರು.