– ಸ್ವಾಮೀಜಿಯಿಂದ 2 ತಿಂಗಳ ಗಡುವು
– ಬೇಡಿಕೆ ಈಡೇರದಿದ್ದರೆ ಶಾಸಕರು ರಾಜೀನಾಮೆ
ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ.
ಶೇ.3 ರಿಂದ ಶೇ.7.5ರಷ್ಟು ಮೀಸಲಾತಿಯನ್ನು ಏರಿಸುವಂತೆ ಬೆಳಗ್ಗಿನಿಂದ ನಗರದಲ್ಲಿ ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ದೌಡಾಯಿಸಿದ ಡಿಸಿಎಂ, ಶೋಷಣೆಗೆ ಒಳಗಾದ ಸಮುದಾಯಕ್ಕೆ ಸಂವಿಧಾನದಲ್ಲಿ ಮೀಸಲಾತಿ ಇದೆ. ಹೀಗಾಗಿ ಸರ್ಕಾರ ಈ ಸಮುದಾಯಕ್ಕೆ ಮೀಸಲಾತಿ ನೀಡಲು ಸಮಿತಿ ರಚಿಸಲು ನಿರ್ಧರಿಸಿದೆ. ಮುಂದಿನ ಸಚಿವ ಸಂಪುಟದಲ್ಲಿ ಸಮಿತಿ ರಚನೆ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು. ಎರಡು ತಿಂಗಳ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗುವುದು ಎಂದು ಹೇಳಿದರು.
ಪ್ರತಿಭಟನಾಕಾರರ ಆಕ್ರೋಶ:
ಡಿಸಿಎಂ ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ಹೇಳುತ್ತಿದ್ದಂತೆಯೇ ಪ್ರತಿಭಟನಾಕಾರರು ಪರಮೇಶ್ವರ್ ವಿರುದ್ಧ ಸಿಡಿದೆದ್ದರು. ಈಗಲೇ ಸಮಯ ನಿಗದಿ ಮಾಡುವಂತೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಡಿಸಿಎಂ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.
ಸಮಿತಿ ರಚನೆಗೆ ವಿರೋಧ:
ನಮ್ಮ ಪಾಲಿಗೆ ನೀವೇ ಅಂಬೇಡ್ಕರ್, ಅಂದುಕೊಳ್ಳುತ್ತೇವೆ ಸಮಯ ನಿಗದಿ ಮಾಡಿ ಎಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯ ಮಾಡಿದರು. ಒಂದು ತಿಂಗಳ ಸಮಯದಲ್ಲಿ ನಿಗದಿ ಮಾಡಿ. ಮೂರು ತಿಂಗಳ ಸಮಯ ಕೇಳಿದ ಸರ್ಕಾರದ ತೀರ್ಮಾನವನ್ನು ಮೊದಲು ಸ್ವಾಮೀಜಿ ಒಪ್ಪಿಲ್ಲ. ಅಲ್ಲದೆ ಮುಂದಿನ ತಿಂಗಳ 25ರೊಳಗೆ ಮೀಸಲಾತಿ ಕೊಡಬೇಕು. ಒಂದು ವೇಳೆ ಕೊಡದೇ ಹೋದರೆ ರಾಜ್ಯ ಹೊತ್ತಿ ಉರಿಯುತ್ತದೆ. ನಿಮ್ಮ ಮನೆಯ ಮುಂದೆಯೇ ಧರಣಿ ಮಾಡುತ್ತೇವೆ ಎಂದು ಪರಮೇಶ್ವರ್ಗೆ ಎಚ್ಚರಿಕೆಯ ಸಂದೆಶ ರವಾನೆ ಮಾಡಿದರು.
ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ. ಇದನ್ನ ಏಕಾಏಕಿ ಮಾಡುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ನಾವೂ ಸಮಯ ಕೋಡೋಣ. ಎರಡು ತಿಂಗಳ ಗಡುವು ನೀಡುತ್ತೇವೆ. ಅಷ್ಟರಲ್ಲಿ ಆಗದೇ ಹೋದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಎರಡು ತಿಂಗಳು ಗಡುವು ಕೊಟ್ಟಲ್ಲಿ ನಮ್ಮ ಕೆಲಸ ಆಗದಿದ್ದಲ್ಲಿ ರಾಜೀನಾಮೆ ಬಿಸಾಕಲಿದ್ದಾರೆ. ಇದಕ್ಕೆ ರಾಜಕೀಯ ನಾಯಕರು ಒಪ್ಪಿಗೆ ಕೊಟ್ಟಿದ್ದಾರೆ. ಸಾಮೂಹಿಕ ರಾಜೀನಾಮೆ ಕೊಡುತ್ತಾರೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.