ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಲಾಬಿಗಳು ಜೋರಾಗಿಯೇ ನಡೆಯುತ್ತಿವೆ. ಮೊದಲ ಅವಧಿಯಲ್ಲಿ ಸ್ಥಾನ ಸಿಗದ ಬೆಳಗಾವಿ ಶಾಸಕ ಉಮೇಶ್ ಕತ್ತಿ ಶತಾಯಗತಾಯ ಈ ಬಾರಿ ಸಚಿವ ಆಗಲೇಬೇಕು ಅಂತ ದೊಡ್ಡ ಮಟ್ಟದಲ್ಲೇ ಲಾಬಿ ಮಾಡುತ್ತಿದ್ದಾರೆ. ಇಂದು ಸಿಎಂ ನಿವಾಸಕ್ಕೆ ಆಗಮಿಸಿದ ಅವರು, ನಂಗೂ ಮಂತ್ರಿ ಸ್ಥಾನ ಕೊಡಿ ಸರ್ ಅಂತ ಯಡಿಯೂರಪ್ಪ ಮೇಲೆ ಮತ್ತೆ ಒತ್ತಡ ಹಾಕಿದ್ದಾರೆ.
ಉಮೇಶ್ ಕತ್ತಿ ಕೇವಲ ಸಿಎಂ ಬಳಿ ಮಾತ್ರ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಜೊತೆಯೂ ದೊಡ್ಡದಾಗಿಯೇ ಲಾಬಿ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ದೆಹಲಿಗೆ ಹೋಗಿ ಕೇಂದ್ರದ ಹಲವು ನಾಯಕರನ್ನ ಭೇಟಿಯಾಗಿ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಹೈಕಮಾಂಡ್ ಯಾವ ಸಂದೇಶ ಕೊಡುತ್ತೋ ಗೊತ್ತಿಲ್ಲ. ಆದರೆ ತಮ್ಮ ಪ್ರಯತ್ನ ಮಾತ್ರ ತಾವು ಬಿಡದೇ ಸಚಿವ ಸ್ಥಾನಕ್ಕೆ ಲಾಬಿ ಮುಂದುವರಿಸುತ್ತಲೇ ಇದ್ದಾರೆ.
ಬೆಳಗಾವಿಯ ಕತ್ತಿ ಸ್ಥಿತಿ ಹೀಗಾದರೆ ಮತ್ತೊಬ್ಬ ನಾಯಕ ಡಿಸಿಎಂ ಲಕ್ಷ್ಮಣ ಸವದಿರದ್ದು ಇನ್ನೊಂದು ತಲೆ ನೋವು. ತಾನು ಡಿಸಿಎಂ ಆಗಿ ಉಳಿಯಬೇಕಾದರೆ ಫೆಬ್ರವರಿಯಲ್ಲಿ ನಡೆಯಲಿರೋ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು. ಹೀಗಾಗಿ ಟಿಕೆಟ್ ನನಗೆ ನೀಡಬೇಕು ಅಂತ ಸವದಿ ಲಾಬಿ ಪ್ರಾರಂಭ ಮಾಡಿದ್ದಾರೆ. ಇಂದು ಕೂಡ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟು ನನಗೆ ಸ್ಥಾನ ಕೊಡಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ.
ಸಂಖ್ಯಾಬಲದ ಪ್ರಕಾರ ಫೆಬ್ರವರಿಯಲ್ಲಿ ನಡೆಯೋ ಒಂದು ಸ್ಥಾನ ಬಿಜೆಪಿಗೆ ಸಿಗಲಿದೆ. ಸವದಿಗೆ ಅಡ್ಡಲಾಗಿರೋದು ಮಾಜಿ ಸಚಿವ ಆರ್.ಶಂಕರ್. ಪರಿಷತ್ ಸದಸ್ಯನ್ನಾಗಿ ಮಾಡಿ ಸಚಿವರಾಗಿ ಮಾಡೋದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ರು. ಹೀಗಾಗಿ ನನಗೆ ಸ್ಥಾನ ಕೊಟ್ಟು ಮಾತು ಉಳಿಸಿಕೊಳ್ಳಿ ಅಂತ ಆರ್ ಶಂಕರ್ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಶಂಕರ್ ಒತ್ತಡವೇ ಸವದಿಗೆ ದೊಡ್ಡ ತಲೆ ನೋವಾಗಿದೆ. ಶಂಕರ್ಗೆ ಒಂದೊಮ್ಮೆ ಸ್ಥಾನ ಕೊಟ್ರೆ ನನ್ನ ಸ್ಥಾನ ಹೋಗೋದು ಗ್ಯಾರಂಟಿ ಅಂತ ತಿಳಿದುಕೊಂಡಿರೋ ಸವದಿ ಹೇಗಾದ್ರು ಮಾಡಿ ಪರಿಷತ್ ಟಿಕೆಟ್ ಗಿಟ್ಟಿಸೋಕೆ ಪ್ರಯತ್ನ ಮಾಡ್ತಾನೇ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.