ಬೆಂಗಳೂರು: ನೂತನವಾಗಿ ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉದ್ಘಾಟಿಸಿದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಳೆಯದಾಗಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಟೈಟಾನ್ ಕಂಪನಿಯ ಸಹಭಾಗಿತ್ವದಲ್ಲಿ ಕಾರ್ಪೋರೆಟ್ ಫಂಡ್ ನಿಂದ ಅನುಮತಿ ಪಡೆದು ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿದ್ದು ಸುಮಾರು 35 ಲಕ್ಷಗಳ ವೆಚ್ಚದಲ್ಲಿ ನೂತನನವಾಗಿ ಈ ಠಾಣೆಯನ್ನು ನಿರ್ಮಿಸಲಾಗಿದೆ.
ಈ ವೇಳೆ ಮಾತನಾಡಿದ ಅವರು, ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡರ ನೇತೃತ್ವದಲ್ಲಿ ಬಹಳ ಚೆನ್ನಾಗಿ ನಿರ್ಮಾಣ ಮಾಡಿ ಭವ್ಯವಾದ ಕಟ್ಟಡದಲ್ಲಿ ನವೀಕರಣಗೊಂಡಿದೆ. ಹೆದ್ದಾರಿಯಲ್ಲಿ ಅಪಘಾತಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎನ್ನುವುದು ಗೊತ್ತಾಗಬೇಕು ಆ ದೃಷ್ಟಿಯಿಂದ ಠಾಣೆಯನ್ನು ಚೆನ್ನಾಗಿ ನವೀಕರಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಇರುವಂತಹ ಜಾಗವನ್ನು ನೋಡಿ ಅಲ್ಲಿ ಠಾಣೆಯನ್ನು ಮಾಡಿದಾಗ, ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಇದೊಂದು ಒಳ್ಳೆಯ ಕೆಲಸವನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಮಾಡಿದ್ದಾರೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನು ಸ್ಪೆಷಲ್ ಸ್ಟೇಷನ್ ಆಗಿ ಬೆಂಗಳೂರು ಸಿಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಹೋಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯೂ ಸಹ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಇತ್ತು ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸ್ಪೆಷಲ್ ಸ್ಟೇಷನ್ ಆಯ್ತು. ಮುಂದಿನ ದಿನಗಳಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯು ಸಹ ಸ್ಪೆಷಲ್ ಸ್ಟೇಷನ್ ಆಗಿ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ ಎಂದು ತಿಳಿಸಿದರು.