ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದ ವಾಹನ ಸವಾರನೊಬ್ಬ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಬರೋಬ್ಬರಿ 19 ಸಾವಿರ ದಂಡ ಕಟ್ಟಿರೋ ಘಟನೆ ಹಲಸೂರಿನಲ್ಲಿ ನಡೆದಿದೆ.
ವಿಶ್ವನಾಥ್ ಸ್ಥಳದಲ್ಲೆ 19 ಸಾವಿರ ರೂ. ದಂಡ ಕಟ್ಟಿದ್ದಾನೆ. ವಿಶ್ವನಾಥ್ ಹಲಸೂರಿನವನಾಗಿದ್ದು ನೀರು ಪೂರೈಕೆಯ ವ್ಯಾಪಾರ ಮಾಡಿಕೊಂಡಿದ್ದ. ಕಳೆದ ಮೂರು ವರ್ಷಗಳ ಹಿಂದೆ ಹೊಂಡಾ ಆಕ್ಟಿವ್ ಬೈಕ್ ಖರೀದಿಸಿದ್ದ. ಈ ಬೈಕಿನಲ್ಲಿ ಮೂರು ವರ್ಷಗಳಿಂದ ಸುಮಾರು 85 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಾನೆ. ಆದರೆ ಎಲ್ಲಿಯೂ ಕೂಡ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರಲಿಲ್ಲ.
ಶುಕ್ರವಾರ ಹಲಸೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಚರಣೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಪೊಲೀಸರು ಟ್ರಾಫಿಕ್ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಆಗ ಬೈಕ್ ಮೇಲೆ ಇದ್ದ ಕೇಸ್ ಕಂಡು ಒಂದು ಕ್ಷಣ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಹೆಲ್ಮೆಟ್ ಇಲ್ಲದೇ ವಾಹನ ಸವಾರ ಮಾಡಿರೋದು, ಸಿಗ್ನಲ್ ಜಂಪ್ ಸೇರಿ ಬರೋಬ್ಬರಿ 85 ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳು ಸೇರಿ ಸುಮಾರು 19 ಸಾವಿರ ದಂಡ ಸ್ಥಳದಲ್ಲೇ ಕಟ್ಟಿಸಿಕೊಂಡಿದ್ದಾರೆ.
ವಾಹನ ಸವಾರ ಬೇರೆ ವಿಧಿ ಇಲ್ಲದೇ 19 ಸಾವಿರ ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗಿದ್ದಾನೆ. ಹಳೆ ಕೇಸ್ಗಳಿಗೆ ಹಳೆ ನಿಯಮದ ಪ್ರಕಾರ ದಂಡ ಹಾಕಿರುವುದರಿಂದ 19 ಸಾವಿರ ಆಗಿದೆ. 85 ಕೇಸ್ಗಳಿಗೂ ಹೊಸ ನಿಯಮದ ಅಡಿಯಲ್ಲಿ ಫೈನ್ ಹಾಕಿದ್ದರೆ ಮತ್ತಷ್ಟು ದಂಡ ಮೊತ್ತ ಹೆಚ್ಚು ಆಗುವ ಸಾಧ್ಯತೆ ಇತ್ತು.