ಬೆಂಗಳೂರು: ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆಗಳು ಗಲಾಟೆಗಳು ಜೋರಾಗುತ್ತಿರುವ ಹಿನ್ನೆಲೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಹೋಗುವ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೆಳಗಿನ ಜಾವ ಸುಮಾರು 6 ಗಂಟೆಯಿಂದಲೂ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ ಗಳಿಗೆ ಕಾಯುತ್ತಿದ್ದಾರೆ. ಬೆಂಗಳೂರಿನಿಂದ ಹಾರೋಹಳ್ಳಿ, ಕನಕಪುರ, ರಾಮನಗರದ ಇತರೆ ಭಾಗಗಳಿಗೆ ಹೋಗಬೇಕಾಗಿರುವ ಪ್ರವಾಣಿಕರು ಬಸ್ ಸೇವೆಯಿಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಡಿಪೋ ಅಧಿಕಾರಿಗಳ ಸೂಚನೆ ಮೇರೆಗೆ ಯಾವುದೇ ಬಸ್ ಬೆಂಗಳೂರಿಂದ ಕನಕಪುರಕ್ಕೆ ತೆರಳುವ ಸಾಧ್ಯತೆ ಇಲ್ಲ. ಆದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರಯಾಣಿಕರಿಗೆ ಕಲಾಸಿಪಾಳ್ಯದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು ಮನವೊಲಿಕೆ ಮಾಡುತ್ತಿದ್ದಾರೆ.
ಕನಕಪುರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಸಿಬ್ಬಂದಿ ಹಾಜರ್ ಆಗಿ ಬಸ್ಸುಗಳನ್ನು ಹೊರಗೆ ತೆಗೆಯದಿರಲು ನಿರ್ಧರಿಸಿದ್ದಾರೆ. ಮಂಗಳವಾರ ರಾತ್ರಿ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ಬಂಧನ ಖಂಡಿಸಿ, 1 ಬಸ್ಸಿಗೆ ಬೆಂಕಿ ಹಚ್ಚಿ, ಸುಮಾರು 4 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಸಮಯ ಕಳೆಯುತ್ತಿದ್ದಂತೆ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಡಿಕೆಶಿ ಬೆಂಬಲಿಗರು ರಸ್ತೆ ಬಂದ್ ಮಾಡಿ, ನಡುರಸ್ತೆಗಳಲ್ಲಿ ಡಯರ್ ಸುಟ್ಟು, ಬಿಜೆಪಿ ನಾಯಕರ ಅಣಕು ಶವಗಳನ್ನು ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.