ಬೆಂಗಳೂರು: ನಗರದಲ್ಲಿ ಟೆಕ್ಕಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಟಿಟಿ ವಾಹನ ಚಾಲಕ ಪ್ರದೀಪ್ ಮತ್ತು ಕ್ಲೀನರ್ ದೀಪಕ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು..?
ನಗರದ ವೈಟ್ಫೀಲ್ಡ್ನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸತೀಶ್ ಕಳೆದ 13ರ ರಾತ್ರಿ ತನ್ನ ಮನೆಗೆ ಹೊರಟಿದ್ದರು. ಸ್ನೇಹಿತನ ಜೊತೆ ಬೈಕ್ನಲ್ಲಿ ಬಂದ ಟೆಕ್ಕಿ ಸತೀಶ್, ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಟಿಟಿ ವಾಹನವನ್ನು ಅಡ್ಡಗಟ್ಟಿ ವಾಹನಕ್ಕೆ ಹತ್ತಿಕೊಂಡಿದ್ರು.
ಟಿಟಿ ಹತ್ತಿದ್ದ ಟೆಕ್ಕಿ ಸತೀಶ್ ಬಳಿ ಪರ್ಸ್ ಖಾಲಿಯಾಗಿತ್ತು. ಚಾರ್ಜ್ ಕೊಡುವ ವಿಚಾರಕ್ಕೆ ಟಿಟಿ ಡ್ರೈವರ್ ಹಾಗೂ ಕ್ಲೀನರ್ ಇಬ್ಬರು ಟೆಕ್ಕಿ ಮೇಲೆ ಗಲಾಟೆ ಮಾಡಿದ್ರು. ಅಷ್ಟೇ ಅಲ್ಲದೆ ಹಣ ಕೊಡೋವರೆಗೂ ಗಾಡಿಯಿಂದ ಕೆಳಗೆ ಇಳಿಸಲ್ಲ ಅಂತ ಇಡೀ ನಗರದ ತುಂಬಾ ಓಡಾಡಿಸಿ ಹಲ್ಲೆ ಮಾಡಿದ್ರು.
ಕೊನೆಗೆ ಎಟಿಎಂ ಬಳಿ ನಿಲ್ಲಿಸಿ ನಿಮ್ಮ ಹಣ ಕೊಡ್ತೀನಿ ಅಂತ ಟೆಕ್ಕಿ ಸತೀಶ್ ಹೇಳಿದ್ರು. ಎಟಿಎಂ ಬಳಿ ಗಾಡಿ ನಿಲ್ಲಿಸಿದ ಇಬ್ಬರು, ಟೆಕ್ಕಿ ಸತೀಶ್ ಬಳಿಯಿಂದ ಮೊಬೈಲ್, ವಾಚ್, ಕಿತ್ಕೊಂಡು ಎಟಿಎಂನಲ್ಲಿದ್ದ ನಾಲ್ಕೂವರೆ ಸಾವಿರ ಹಣವನ್ನು ಕೂಡ ತೆಗೆದುಕೊಂಡು ಎಸ್ಕೇಪ್ ಆಗಿದ್ರು. ನಂತರ ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಟಿಟಿ ವಾಹನ ಚಾಲಕ ಪ್ರದೀಪ್ ಮತ್ತು ಕ್ಲೀನರ್ ದೀಪಕ್ ಅನ್ನೋರನ್ನು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಡ್ರಾಪ್ ನೆಪದಲ್ಲಿ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕು ಅಂತ ಪೊಲೀಸರು ಮನವಿ ಮಾಡಿದ್ದಾರೆ.