ಬೆಂಗಳೂರು: ಮಂಗಳವಾರ ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಿ ಇಂದು ಬೆಳಗ್ಗೆ ನಗರಕ್ಕೆ ಬಂದಿದ್ದ ಮಹಿಳಾ ಟೆಕ್ಕಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ 10 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೀತಾಂಜಲಿ(27) ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ. ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಏನಿದು ಪ್ರಕರಣ?
ಗೋವಾ ಮೂಲದ ಗೀತಾಂಜಲಿ ತಮ್ಮನ ಜೊತೆ ಎಚ್ಎಚ್ಎಸ್ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ 11.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರತ್ತಹಳ್ಳಿ ಪೊಲೀಸರು ಈಗ ಗೀತಾಂಜಲಿ ಮೊಬೈಲ್ ಕರೆಗಳನ್ನು ಪರಿಶೀಲಿಸುತ್ತಿದ್ದು, ಸಹೋದ್ಯೋಗಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. 6 ತಿಂಗಳ ಹಿಂದೆ ಕಂಪೆನಿಗೆ ಸೇರಿದ್ದ ಗೀತಾಂಜಲಿ ಮಂಗಳವಾರ ಮತ್ತು ಗುರುವಾರ ರಜೆ ಹಾಕಿದ್ದರು. ರಜೆ ಹಾಕಿದ್ದರೂ ಅವರು ಇಂದು ಗೋವಾದಿಂದ ಮರಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
https://www.youtube.com/watch?v=6yT49Ani9xI