– ಅಂದು ವಿರೋಧ, ಇಂದು ಹಣ ಬಿಡುಗಡೆ
ಬೆಂಗಳೂರು: ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ಬಿಡುಗಡೆ ಬಗ್ಗೆ ಪ್ರಸ್ತಾಪ ನೋಡಿದಾಗ ಕರಾವಳಿಗರು ಸುಸ್ತೋ ಸುಸ್ತು. ಯಾಕೆಂದರೇ ಇದೇ ಬಿಜೆಪಿಯವರು ಎತ್ತಿನ ಹೊಳೆ ಯೋಜನೆ ವಿರೋಧಿಸಿ 2016ರಲ್ಲಿ ರಥಯಾತ್ರೆ ಮಾಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಅಲ್ಲದೇ ರಥಯಾತ್ರೆ ಮಾಡಿ ಜನರನ್ನು ಎತ್ತಿನ ಹೊಳೆ ವಿರೋಧಿಸಿ ಹೋರಾಟ ಮಾಡುವಂತೆ ಸಂಘಟಿಸಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಬಿಜೆಪಿ ವರಸೆ ಬದಲಾಗಿದೆ.
ಅಧಿಕಾರಕ್ಕೆ ಬರುವ ಮೊದಲು ಎತ್ತಿನಹೊಳೆ ವಿರೋಧಿಸಿ ರಥಯಾತ್ರೆ ಮಾಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎತ್ತಿನ ಹೊಳೆ ಯೋಜನೆಗೆ ಹಣಕಾಸು ಮಂಜೂರು ಮಾಡಿ ಈಗ ಟೀಕೆಗೆ ಒಳಗಾಗಿದೆ. ಎತ್ತಿನ ಹೊಳೆ ಯೋಜನೆ ಜಾರಿ ಮಾಡಲು ನಾವು ಬಿಡಲು ಸಾಧ್ಯವೇ ಇಲ್ಲ ಅಂತಾ ನಳಿನ್ ದೊಡ್ಡ ದೊಡ್ಡ ಭಾಷಣಗಳನ್ನ ಮಾಡಿದ್ದರು. ಆದರೆ ಈಗ ಅವರದ್ದೇ ಸರ್ಕಾರ ಬಂದ ಮೇಲೆ ಯೋಜನೆಗೆ ದುಡ್ಡು ಬಿಡುಗಡೆ ಮಾಡಿದೆ. ಎತ್ತಿನ ಹೊಳೆ ಹೋರಾಟ ಕೇವಲ ಪಾಲಿಟಿಕ್ಸ್ ಗಿಮಿಕ್ ಎಂದು ಕರಾವಳಿಯವರು ಮಾತಾನಾಡಿಕೊಳ್ಳುತ್ತಿದ್ದಾರೆ.